Monday, September 14, 2020

ಕಡಲು

ಕಿನಾರೆಯಲ್ಲಿ ನಿಂತು ಮೊದಲು ನಿನ್ನ ಕಂಡಾಗ ಮನದಲ್ಲಿ ಉಲ್ಲಾಸದ ಅಲೆಗಳು ಮೂಡಿತಾಗ

ಅಲೆಅಲೆಯಾಗಿ ನೀ ಬಂದು ಕಾಲುಗಳ ಸೋಕಲು ನೀಡಿತು ರೋಮಾಂಚನ ತನುಮನಕೆ ಮೊದಮೊದಲು

ಒಮ್ಮೆ ಚಿಕ್ಕ ಅಲೆ ಒಮ್ಮೆ ದೊಡ್ಡ ಅಲೆ

ನಿನಗೆ ಸಂತಸವೋ ಅಥವಾ ದುಃಖವೋ ಇದು ಯಾವುದರ ಪ್ರತೀಕವೋ ನಾನರಿಯೆ

ಮೊದಲು ನೀ ಶಾಂತಮೂರ್ತಿಯಂತೆ ಕಂಡುಬಂದರೂ 

ನಂತರ ಕಂಡುಬಂದಿತು ನಿನ್ನ ರೌದ್ರರೂಪ 

ನೀನಂತೂ ನನಗೆ ಬಿಡಿಸಲಾಗದ ಒಗಟು

ನಿನ್ನಲ್ಲಿ ಅಡಗಿವೆ ವಿಧವಿಧ ಜೀವರಾಶಿಗಳು ನೀ ಕರುಣಾಮಯಿ ಎನ್ನಲೇ? ಅಥವಾ ನಿನ್ನ ವಿಕೋಪಕ್ಕೆ ಬಲಿಯಾಗಿ ಹೆಣವಾಗಿರುವ ರಾಶಿ ರಾಶಿ ಜೀವಗಳ ಕಂಡು ಜಲರಾಕ್ಷಸ ಎನ್ನಲೇ?

ಆದರೂ ನಿನ್ನ ನೋಟ ಬಲು ಚೆಂದ

ನಿನಗಿದೆ ನಿನ್ನದೇ ಆದ ಅಂದ

ನಿನ್ನೊಳಗೆ ಅವಿತುಕೊಳ್ಳಲು ಮುನ್ನುಗ್ಗುತ್ತಿರುವ ಸೂರ್ಯನ ಕಂಡಾಗಲಂತೂ ಮನಕೆ ಆನಂದ

ನಿನ್ನ ಸಹವಾಸದಲ್ಲಿ ಏನೋ ಒಂದು ರೀತಿಯ ನೆಮ್ಮದಿ

ದೂರವಾಗಿದೆ ದುಃಖ ದುಮ್ಮಾನಗಳು 

ನಿನ್ನಲ್ಲಿರುವ ಉಪ್ಪು ನೀರಂತೆ ಗಡಸಾಗಿದ್ದ ಮನವು ಈಗ ತಿಳಿಯಾಗಿದೆ

ಓ ಶರಧಿ, ಅರಿತವರು ಯಾರು ನಿನ್ನ ಪರಿಧಿ ಒಂದಂತೂ ನಿಜ ನಿನಗೂ ಈ ಮನಕ್ಕೂ ಏನೋ ಸಾಮ್ಯತೆ ಅದಕ್ಕೆ ಇರಬೇಕು ನೀನೀ ಮನಕ್ಕೆ ಹತ್ತಿರ 

No comments: