Wednesday, September 30, 2020

ಕನಸಿನಲ್ಲಿ ಬಂದವಳು

ನಲ್ಲೆ, ಬಹಳ ದಿನಗಳಾಯ್ತು ನೀ ಕನಸಲ್ಲಿ ಬಾರದೆ ಮುಖವ ತೋರದೆ ಎತ್ತ ಹೋದೆ ನೀ ನನ್ನಿಂದ ಬಹುದೂರ

ನನಗಾಗುತ್ತಿರುವ ವಿರಹದ ಬಾಧೆ ನಿನಗಿಲ್ಲವೇ? ಈಗಂತು ನನಗಿದು ಹೊಸತಲ್ಲ ಅಗಲಿಕೆಯ ನೋವು ಹೃದಯದಲಿ ಮನೆ ಮಾಡಿರುವಾಗ

ನೀ ಹೇಗಿರುವೆಯೋ ನಾ ಅರಿಯೆ ನಿನ್ನ ರೂಪದ ಬಗ್ಗೆ ನಾ ತಿಳಿಯೆ ಆದರೂ ನೀ ಬಂದಾಗ ನಾ ಗುರುತಿಸುವೆ ಏಕೆಂದರೆ ನೀ ನನ್ನ ಕನಸಿನ ನಲ್ಲೆ, ಕೇವಲ ಕನಸಿನ ನಲ್ಲೆ

ವ್ಯರ್ಥ ಚಿಂತೆ

 ಚಿಂತೆಯೇಕೆ ಮಾಡುವೆ ಮನವೇ ಚಿಂತಿಸಿದೊಡೆ ಒಡೆದ ಕನ್ನಡಿ ಒಂದುಗೂಡುವುದೇ? ಬಾಡಿದ ಹೂವರಳುವುದೇ? ಮಿಂಚಿ ಹೋದ ಕಾಲ ಮತ್ತೆ ಬರುವುದೇ? ಸುಮ್ಮನೆ ಚಿಂತಿಸುವೆಯೇಕೆ?

ಚಿಂತೆಯೆಂಬ ಬೆಂಕಿ ನಿನ್ನನ್ನು ಸುಟ್ಟು ಅದರ ಕಾವು ದೇಹಕ್ಕೆ ತಟ್ಟಿದೆ ನಿನಗೆ ನೆಮ್ಮದಿ ಶೂನ್ಯ ದೇಹಕ್ಕೆ ಅನಾರೋಗ್ಯ ಚಿಂತಿಸುವಿಯೇಕೆ?

ಚಿಂತಿಸಿ ಚಿಂತಿಸಿ ನೀ ಸಾಧಿಸಿದ್ದೇನು ನಿನ್ನ ಕೈಯಲ್ಲೇನೂ ಇಲ್ಲದಾಗ ಚಿಂತಿಸಿ ಫಲವೇನು?

ಹೆಚ್ಚು ಚಿಂತಿಸಿದಷ್ಟೂ ನೀ ಹಣ್ಣಾಗಬೇಕಷ್ಟೇ ಚಿಂತಿಸಿ ಸಿಗುವ ಫಲವಷ್ಟೇ ಚಿಂತೆಯ ಪಕ್ಕಕ್ಕೆ ದೂಡಿ ನೀ ನಿರಾಳವಾಗು ಅದರಿಂದ ನೀ ಮುಕ್ತವಾಗು

ಚಿಂತೆಯೆಂಬ ದಾವಾನಲದಲಿ ನೀ ಬೇಯದಿರು ಚಿಂತೆಯಿಂದ ಮಮ್ಮಲ ಮರುಗದಿರು ವಿಲಪಿಸದಿರು ಚಿಂತಿಸಿ ನೀ ಕ್ಷೋಭೆಗೊಳಗಾಗದಿರು

ಚಿಂತೆಯೇಕೆ ಮಾಡುವೆ ನೀ ಚಿಂತಿಸದಿರು ಮನವೇ ಎಲ್ಲ ನೋಡಲು ಮೇಲೆ ಅವನಿರುವಾಗ ನೀ ನಿಶ್ಚಿತೆಯಿಂದಿರಬಾರದೆ?

Thursday, September 24, 2020

ಯೌವನ

ಹದಿಹರೆಯದ ವಯಸ್ಸು ಚಂಚಲ ಮನಸ್ಸು ಸದಾ ಕಾಣುವುದು ಹಗಲುಗನಸು

ಹೃದಯದಿ ನೂರಾರು ಬಯಕೆಗಳು ಏನೇನೋ ಹುಚ್ಚು ಆಸೆಗಳು 

ಅನಿಸುವುದು ಈ ಜಗತ್ತು ಎಷ್ಟು ಸುಂದರ ಎಲ್ಲವೂ ನಯನಮನೋಹರ

ಮನವು ರೆಕ್ಕೆ ಬಿಚ್ಚಿ ಆಸೆಯ ಬಾನಲಿ ಹಾರಿ ಕಲ್ಪನೆಯ ಲೋಕದಿ ತಾ ತೇಲುವುದು

ಏಕೋ ನಾಚಿಕೆ ಏನೋ ಕಾತರ ಉಡುಗೆ ತೊಡುಗೆಯಲ್ಲೂ ಏನೋ ವಯ್ಯಾರ

ಒಮ್ಮೆ ಉಕ್ಕಿ ಬಂದರೆ ನಗು ಮತ್ತೊಮ್ಮೆ ಉಕ್ಕಿ ಬರುವುದು ಕಂಬನಿಯ ಧಾರೆ

ಯಾವುದೀ ಮಾಯೆ ಏನಿದರ ಛಾಯೆ ಹದಿಹರೆಯದ  ವಯಸಲಿ ಎಲ್ಲವೂ ಸೊಗಸು

ಕಾಣೆಯಾಗಿದ್ದೇನೆ

ನನ್ನಲ್ಲಿ ನಾನಿಲ್ಲ ಎಲ್ಲಿ ಕಳೆದುಹೋದೆ ನಾನು? ಮನದ ತುಂಬಾ ತುಂಬಿದೆ ಬರೀ ಅಂಧಕಾರ

ಮೊದಲಿದ್ದ ಭಾವನೆಗಳು ಈಗಿಲ್ಲ ಮೊದಲಿದ್ದ ಆಸೆಗಳೂ ಇಲ್ಲ ಮೊದಲಿದ್ದ ಜೀವನೋತ್ಸಾಹ ಇರದೇ ಜೀವಸೆಲೆಯೇ ಬತ್ತಿ ಹೋಗಿದೆಯಲ್ಲ

ಜಡತ್ವ ತನು ಮನವ ಹಾಸುಹೊಕ್ಕು ಕ್ರಿಯಾಶೀಲತೆಯ ಹೊರ ತಳ್ಳಿದೆ ಎಲ್ಲಿ ಕಳೆದುಹೋದೆ ನಾ ಈ ಸ್ಪರ್ಧಾತ್ಮಕ ಯುಗದಿ?

ಕೀಳರಿಮೆಯ ಹುಳು ಮನವ ಕೊರೆಯುತಿರುವಾಗ ಹತಾಶೆಯ ಶರಧಿಯಲಿ ಎಲ್ಲಿ ಮುಳುಗಿಹೋದೆ ನಾ? ನನಗೇ ಅರಿಯದಂತೆ ಎಲ್ಲಿ ಕಳೆದುಹೋದೆ ನಾ? ಎಲ್ಲಿ ಕಳೆದು...

ಮಿತಿ

ಇನ್ನೆಷ್ಟು ಕೊರಗಲಿ ಇನ್ನೆಷ್ಟು ಮರುಗಲಿ ಇನ್ನೆಷ್ಟು ಕಂಬನಿ ಮಿಡಿಯಲಿ ಈ ದುಃಖಕೆ

ಇನ್ನೆಷ್ಟು ನಿಟ್ಟುಸಿರು ಹೊರಹೊಮ್ಮಿಸಲಿ ಇನ್ನೆಷ್ಟು ಪಾತಾಳಕ್ಕಿಳಿಯಲಿ ಈ ಕಷ್ಟಗಳ ಸಹಿಸಲಾರದೆ

ಕೈ ಹಿಡಿದು ನಡೆಸುವವನೆ ಕೈ ಕೊಟ್ಟಾಗ ನಾ ಎಡವಿ ಬೀಳುತ್ತಿದ್ದರೂ ನೋಡಿ ಸುಮ್ಮನಿರುವಾಗ ಇನ್ನೆಷ್ಟು ದುಃಖಿಸಲಿ

ಆಸೆ ಪಟ್ಟಿದ್ದು ಯಾವೊಂದೂ ಕೈಗೂಡದಾಗ ಇನ್ನೆಷ್ಟು ನಿರಾಸೆಗೊಳ್ಳಲಿ ನಾನೀಗ

ನೆಮ್ಮದಿಯ ಬಾಳಿಂದ ಬಹುದೂರ ಸಾಗುತ್ತಿರುವಾಗ ಸುಖವನ್ನೆಲ್ಲ ಕಳೆದುಕೊಳ್ಳುತ್ತಿರುವಾಗ ಇನ್ನೆಷ್ಟು ಬೇಸರಿಸಲಿ

ಭಾವನೆಗಳೇ ಬತ್ತಿಹೋಗುತ್ತಿರುವಾಗ ಬದುಕಿನ ಶೃತಿ ಲಯ ತಪ್ಪುತ್ತಿರುವಾಗ ಇನ್ನೆಷ್ಟು ಸಂಕಟಪಡಲಿ

ಎಲ್ಲದರ ಬಗ್ಗೆ ವಿರಕ್ತಿ ಮೂಡುತ್ತಿರುವಾಗ ಎಲ್ಲವ ತೊರೆಯಲು ಕಾಯುತ್ತಿರುವಾಗ ಇನ್ನೆಷ್ಟು ಆತಂಕಪಡಲಿ

ಭಯವೆಂಬ ಭೂತವು ಹೃದಯದಲ್ಲಡಗಿರುವಾಗ ಮಾತು ಮೌನಗಳು ರುಚಿಸದಾಗ ಇನ್ನೆಷ್ಟು ನೋವುಣ್ಣಲಿ

ಇನ್ನೆಷ್ಟು ದಿನ ಈ ಕಷ್ಟ ಕಾರ್ಪಣ್ಯ ಇನ್ನೆಷ್ಟು ದಿನ ಈ ನೋವು ನಿರಾಸೆ ಇನ್ನೆಷ್ಟು ದಿನ ಸಹಿಸಲಿ ಈ ದುಃಖ ದುಮ್ಮಾನ

ಹೇ ವಿಧಾತ ಮರುಕವಿರಲಿ ಈ ತಿರುಕಳ ಮೇಲೆ ಮಿತಿ ಇರಲಿ ನೀ ನೀಡುವ ಕಷ್ಟಗಳಿಗೂ ಮುಕ್ತಾಯವ ಹಾಡು ಎಲ್ಲದಕ್ಕೂ ಇಲ್ಲದಿದ್ದರೆ ಇನ್ನೆಷ್ಟು ಸಹಿಸಲಿ?

ದುಃಖ

ರೆಪ್ಪೆಗಳ ಹಿಡಿತಕ್ಕೆ ಸಿಗದೆ ಜಾರುತ್ತಿದೆ ಕಂಬನಿ ಕೆನ್ನೆಗಳ ತೋಯಿಸುತ್ತ ಮುನ್ನುಗ್ಗುತ್ತಿದೆ ಗಲ್ಲದವರೆಗೆ

ಭೂಮಿಗೆ ಜಾರಿ ಬಿದ್ದು ಚದುರಿ ಹೋಯಿತು ಯಾರಿಗೂ ಕಾಣದಂತೆ ಆವಿಯಾಯಿತು

ಇನ್ನೊಂದು ಮತ್ತೊಂದು ಉರುಳುತ್ತಿವೆ ಒಂದೊಂದೂ ಸ್ಪರ್ಧೆಯೇನೂ ಎಂಬಂತೆ

ಹೃದಯದಲ್ಲಿ ಅಡಗಿರುವ ದುಃಖ ಹೀಗಾದರೂ ಕರಗುತ್ತಿದೆ ಜೊತೆಗೆ ನಿಟ್ಟುಸಿರು ತೇಲುತ್ತಿದೆ

Tuesday, September 22, 2020

ಬಿಸಿತುಪ್ಪ

ಏಕೆ ನೀಡಿದೆ ಈ ಜೀವನ ಕಲ್ಲು ಮುಳ್ಳುಗಳ ನೋವಿನ ಪಯಣ ಸಂತೋಷದ ಕ್ಷಣಗಳು ಕ್ಷಣಿಕ ದುಃಖವೇ ಶಾಶ್ವತ ಬಳಿಕ

ನೆಮ್ಮದಿಯಿರದ ಈ ಬಾಳು ನಿತ್ಯವೂ ಒಂದೊಂದು ಗೋಳು ಮನದಲ್ಲಿ ಎದ್ದಿದೆ ಅಶಾಂತಿಯ ಅಲೆ ಆನಂದವು ಕಳೆದುಕೊಂಡಿದೆ ತನ್ನ ನೆಲೆ

ಯಾರಿಗೆ ಬೇಕು ಈ ನೀರಸ ಬದುಕು ಸಂತಸವಿಲ್ಲಿ ಹರುಕು ಮುರುಕು ಸಾಯಲೂ ಸಾಲುತ್ತಿಲ್ಲ ಧೈರ್ಯ ದೇವರೇ ಸಾಕು ನಿನ್ನೀ ಕ್ರೌರ್ಯ

ಒಂದಾದ ಮೇಲೊಂದು ಕಷ್ಟಗಳು ಅನಿಸಿದೆ ಬಾಳು ನರಕ ಸಾಕಾಗಿದೆ ಈ ನರಕದ ಸಹವಾಸ ಇದಕ್ಕಿಂತ ವಾಸಿ ವನವಾಸ

ಎಲ್ಲವ ತೊರೆಯಲೂ ಆಗದೆ ಮರೆಯಲೂ ಬಾರದೆ ಬದುಕಲೂ ಆಗದೆ ಬಿಸಿತುಪ್ಪದಂತೆ ಈ ಬದುಕು

Saturday, September 19, 2020

ನಾಳೆ

ನಾಳೆಯು ಬರಲಿ ಖಂಡಿತ ಬರಲಿ ಮುದುಡಿದ ಮನಕೆ ನವ ಚೈತನ್ಯವ ತರಲಿ ಸೊರಗಿದ ತನುವಿಗೆ ನವ ಉಲ್ಲಾಸ ತರಲಿ

ಇಂದಿನ ಕಷ್ಟಗಳು ಇಂದಿಗೆ ಮುಗಿಯಲಿ ನಿನ್ನೆಯ ನೋವು ಇಂದೇ ಇಂಗಲಿ ಸುಖ ಸಂತೋಷವ ನಾಳೆಯು ತರಲಿ

ಚಿಗುರಿದ ಕನಸುಗಳು ಚಿವುಟದೆ ಉಳಿಯಲಿ ಬರಿ ಹಗಲುಗನಸಾಗದೆ ನನಸಾಗುವ ನಾಳೆಯು ಬೇಗನೆ ಬರಲಿ

ಹೃದಯವು ನೆಮ್ಮದಿಯಿಂದ ಹಗುರಾಗಲಿ ಚಿಂತೆಯ ಕಂತೆಯು ದೂರವಾಗಲಿ ನೆಮ್ಮದಿಯೊಂದಿಗೆ ನಾಳೆಯು ಬರಲಿ

ಕಹಿ ನೆನಪುಗಳ ಮನವು ಮರೆಯಲಿ ಸಿಹಿ ನೆನಪುಗಳು ಮಾತ್ರ ಉಳಿಯಲಿ ಆ ನೆನಪುಗಳೇ ನಾಳೆಗೆ ಶಾಶ್ವತವಾಗಲಿ

ಎಲ್ಲ ಸೋಲುಗಳು ಇಂದಿಗೆ ಮುಗಿಯಲಿ ಅಪಮಾನವೆಂಬ ಅಸುರನು ಇಂದೇ ಸಾಯಲಿ ಗೆಲುವಿನ ಅಶ್ವವ ಏರುತ ನಾಳೆಯು ಹೆಮ್ಮೆಯಿಂದ ಬರಲಿ

ಕಂಬನಿಗಳೆಲ್ಲ ಇಂದೇ ಜಿನುಗಲಿ ನಿರಾಸೆ ನಿಟ್ಟುಸಿರು ಇಂದಿಗೆ ಕೊನೆಯಾಗಲಿ ತುಂಟ ಕಿರುನಗೆ ಅಧರದ ಮೇಲೆ ಮೂಡಿಸುವ ನಾಳೆಯು ಬರಲಿ

ಕೆಟ್ಟ ದಿನಗಳು ಇಂದಿಗೆ ಮುಗಿಯಲಿ ಕೆಟ್ಟ ಯೋಚನೆಗಳು ಇಂದಿಗೆ ನಿಲ್ಲಲಿ ಹೊಸಬೆಳಕನ್ನು ಹೊತ್ತು ನಾಳೆಯು ಬರಲಿ

ಮತ್ತೆ ಚೈತ್ರವು ಬರಲಿ ನಾಳೆಯು ಅದನು ತರಲಿ ಒಣಗಿ ಹೋದ ಮಾಮರವು ಮತ್ತೆ ಚಿಗುರಲಿ ಹರುಷವು ತಾ ನಲಿಯಲಿ

Friday, September 18, 2020

ಜ್ಞಾನ

ದಿಗಂತದಲ್ಲಿ ಮೂಡುತ್ತಿರುವನು ರವಿಯು ಎಲ್ಲೆಲ್ಲೂ ಬೆಳಕ ಚೆಲ್ಲುತ್ತ ಜಗದ ಅಂಧಕಾರವ ಬಡಿದೋಡಿಸುತ್ತ ಆದರೆ, ಈ ಮನದ ಸುತ್ತಲೂ ಆವರಿಸಿದೆ ಕಾರ್ಗತ್ತಲು ಅದನ್ನು ಮಾತ್ರ ಸೀಳದೆ ಹೋಯಿತಲ್ಲ ರವಿಯೇ ನಿನ್ನ ಬೆಳಕು!

ಸಂಕ್ರಾಂತಿಯು ಬಂದಿತು ನಿನ್ನ ಪಥ ಬದಲಾಯಿತು ಆದರೆ, ಈ ಅಂಧಕಾರದ ಪಥ ಮಾತ್ರ ಏಕೋ ಹಾಗೆಯೇ ಸ್ಥಿತ!

ಈ ಕತ್ತಲಿಗೆ ಮೌಢ್ಯತೆಯೇ ಕಾರಣವಿರೆ ಅದ ಸೀಳಲು ಸಾಕು ಜ್ಞಾನವೆಂಬ ಬೆಳಕಿನ ಆಸರೆ ಜ್ಞಾನದಿಂದ ಮಾತ್ರ ಈ ಅಂಧಕಾರ ಆಗುವುದು ಕೈಸೆರೆ

ದಿಗಂತದಲ್ಲಿ ಮುಳುಗುತ್ತಿರುವ ರವಿಯೇ ನಾಳೆ ಮತ್ತೆ ಮೂಡಿ ಬಾ ಜ್ಞಾನದ ದೀವಿಗೆ ಹೊತ್ತು ತಾ ಜಗತ್ತನ್ನೇ ಅರಳಿಸು ಮನಮಂದಿರವ ಬೆಳಗಿಸು

Wednesday, September 16, 2020

ಕ್ರೌರ್ಯ

ಹೇ ಮನುಜ, ಅಬ್ಬಾ ನೀನೆಷ್ಟು ಕ್ರೂರಿ! ನೀನೂ ಸುಖವಾಗಿರಲಾರೆ ಬೇರೆಯವರಿಗೂ ನೆಮ್ಮದಿ ನೀಡಲಾರೆ ನಿನ್ನ ಪಾತಕಗಳು ಒಂದೇ ಎರಡೇ

ನೀರಲ್ಲಿ ಹಾಯಾಗಿರುವ ಮೀನಿಗೆ ಬಲೆ ಬೀಸುವೆ ನೂರಾರು ಜೇನ್ನೊಣಗಳು ಸಂಪಾದಿಸಿದ ಜೇನ ಕಬಳಿಸುವೆ ಸ್ವಚ್ಚಂದವಾಗಿ ಹಾರಾಡುವ ಹಕ್ಕಿಯ ರೆಕ್ಕೆ ಕತ್ತರಿಸುವೆ

ಮಳೆಯನ್ನು ಇಳೆಗೆ ತರಿಸುವ ಮರಗಳ ಕಡಿಯುವೆ ಕಾಡಲ್ಲಿರುವ ಮೃಗಖಗಗಳ ಶೋಕಿಗಾಗಿ ಬಲಿ ಕೊಡುವೆ ಹುರಿದು ಮುಕ್ಕುವೆ

ಮನುಷ್ಯರನ್ನೂ ನೀ ಬಿಡಲಾರೆ! ಕೊಲೆ ಸುಲಿಗೆ ಅತ್ಯಾಚಾರ ನಿನ್ನಿಂದ ಎಲ್ಲವೂ ಅನಾಚಾರ

ನೀ ನರನೋ ನರರಾಕ್ಷಸನೋ ಯೋಚಿಸು ಎಲ್ಲವೂ ಇರುವುದು ನಿನ್ನ ಕೈಯಲ್ಲಿ ಎಲ್ಲದಕ್ಕೂ ಆಗುವೆ ನೀ ಹೊಣೆಯಿಲ್ಲಿ

ನಿನ್ನ ಕ್ರೌರ್ಯಕ್ಕೂ ಇತಿಮಿತಿ ಇರಲಿ ನಿನ್ನಿಂದ ವಿಶ್ವಶಾಂತಿ ಹೊಂದಲಿ ಎಲ್ಲರ ಬಾಳು ಹಸನಾಗಲಿ ಈ ಭೂಮಿಯಲ್ಲಿ ನಿನ್ನ ಹೆಸರು ಚಿರವಾಗಲಿ ನಿನ್ನ ಕೃತ್ಯಗಳು ನಿನಗೇ ಮುಳುವಾಗದಿರಲಿ

ದುರಂತ

ಕಣ್ಣುಗಳು ಮಂಜಾಗಿ ಹನಿಗೂಡಿ ಮುತ್ತಾಗಿ ಕಂಬನಿಯ ರೂಪದಲಿ ಜಾರಿ ಬೀಳುತ್ತಿದೆ

ಪ್ರೀತಿಯ ಸಿಂಚನವಿರದೆ ಬಾಡಿರುವ ಹೃದಯದಿಂದ ಹೊರಹೊಮ್ಮುತ್ತಿರುವ ವೇದನೆಯ ಮೂಕರಾಗ ಗಾಳಿಯಲಿ ತೇಲಿಹೋಗುತ್ತಿದೆ

ಕಂಡ ಕನಸುಗಳು ಬರಿ ಹಗಲುಗನಸಾಗಿ ಅತ್ತ ನನಸಾಗಲಾರದೆ ಇತ್ತ ಕನಸಾಗಿಯೂ ಉಳಿಯಲಾರದೆ ಪರಿತಪಿಸಿವೆ

ಮಾತುಗಳು ಎಂದೋ ಮರೆಯಾಗಿ ಮೌನವೇ ಮಾತಾಗಿ ಬದುಕು ನೀರಸವಾಗಿ ಬೇಸರ ತರಿಸಿ ಜೀವ ಹಿಂಡಿದೆ

ನೀರಿಂದ ಹೊರಬಂದ ಮೀನಂತೆ ರೆಕ್ಕೆ ಮುರಿದ ಹಕ್ಕಿಯಂತೆ ನೀನಿರದ ಈ ಬದುಕು ಬರಡಾಗಿದೆ

ಈ ನಿಸ್ತೇಜ ಕಣ್ಣುಗಳು ಕ್ಷೋಭೆಗೊಳಗಾದ ಮನ ಚಟುವಟಿಕೆ ಮರೆತ ತನು ನೆಮ್ಮದಿಯಿರದ ಬಾಳು ಈ ದುರಂತಕ್ಕೆ ಸಾಕ್ಷಿಯಾಗಿವೆ

ಮೊರೆ

ಸುಖವ ಕೊಡುವುದ ಮರೆತರೂ ಕಷ್ಟ ಕೊಡುವುದ ಮರೆಯಲಿಲ್ಲ ನಿನ್ನನ್ನೇ ನಂಬಿದ್ದರೂ ನೀ ಉದಾರತೆ ಮೆರೆಯಲಿಲ್ಲ

ಒಂದಾದ ಮೇಲೆ ಒಂದರಂತೆ ಗಾಯದ ಮೇಲೇ ನೀ ಬರೆ ಎಳೆದೆ ಸೋತು ಸುಣ್ಣವಾದ ಮನವನ್ನು ಇನ್ನಷ್ಟು ಪಾತಾಳಕ್ಕೆ ತಳ್ಳಿದೆ

ಇನ್ನು ನಾ ಏನ ಮಾಡಲಿ 

ಯಾರ ಕೂಗಿ ಕರೆಯಲಿ 

ಇದ್ದ ಅಲ್ಪ ಸ್ವಲ್ಪ ನಂಬಿಕೆಗೂ ಹಾಕಿದೆ ನೀ ಕೊಡಲಿ

ಕರಗದೆ ಹೋದೆಯಲ್ಲ ನೀ ಈ ಕಂಬನಿಗೆ

ಮರುಗದೆ ಉಳಿದೆಯಲ್ಲ ನೀ ನನ್ನ ದುಃಖಕೆ ಆತ್ಮವಿಶ್ವಾಸವನ್ನು ಅಳಿಸಿ ಹಾಕಿದೆಯಲ್ಲ

ಅಂಬಿಗ ನೀನೆಂದು ತಿಳಿದು ಅರಿಯದ ದೋಣಿಗೆ ನಾ ಕಾಲಿಟ್ಟೆ 

ಸುಳಿಗೆ ಸಿಕ್ಕಿ ನಾ ಬಳಲಿದಾಗ ತಿಳಿದು ತಿಳಿದು ಸುಮ್ಮನಿರುವೆಯಾ?

ಕತ್ತಲೇ ತುಂಬಿರುವ ಈ ಬಾಳಲಿ ಹೊಸಬೆಳಕ ನೀ ತಾರೆಯ? ಸರಿದಾರಿ ನನಗೆ ತೊರೆಯ? ಹೊಸ ಬದುಕಿಗೆ ನಾಂದಿ ಹಾಡೆಯ?

ಅನಿರೀಕ್ಷಿತ ಮಜಲುಗಳ ಸಂಗಮ ಈ ಬದುಕು ನೀನೇ ನೀಗಿಸಬೇಕು ಎಲ್ಲ ತೊಡುಕು

Tuesday, September 15, 2020

ಅರಿಷಡ್ವರ್ಗ

ಮತ್ತೊಬ್ಬ ಬುದ್ಧ ಮತ್ತೊಬ್ಬ ಮಹಾವೀರ ಹುಟ್ಟಿ ಬರುವನೆ ಈ ಭೂಮಿಯಲ್ಲಿ? ಮತ್ತೊಂದು ಶತಮಾನ ಕಾಯಬೇಕಿಲ್ಲ ಅದಕ್ಕಾಗಿ ಓ ಮನುಜ, ನಿನ್ನಿಂದಲೇ ಅದು ಸಾಧ್ಯ 

ಎಂದು ನೀ ಅರಿಷಡ್ವರ್ಗವ ಗೆಲ್ಲುವೆಯೋ ಅಂದೇ ಆ ಸುದಿನ ಅದುವೇ ಮೋಕ್ಷಕ್ಕೆ ದಾರಿ

ಕಾಮ ಕ್ರೋಧ ಲೋಭ ಮೋಹ ಮದ ಮಾತ್ಸರ್ಯಗಳೇ ನಿನ್ನ ಶತ್ರುಗಳು ಆಜನ್ಮ ವೈರಿಗಳು

ದಹಿಸಿಕೊಳ್ಳುವೆಯೇಕೆ ಕಾಮದ ಬೆಂಕಿಯಿಂದ ನಿನ್ನ ನೀ 

ಕೊನೆಗೊಂದು ದಿನ ಮಣ್ಣಿಗೆ ಸೇರುವುದೀ ದೇಹ

ಕೋಪದ ಕೈಗೆ ಬುದ್ಧಿ ನೀಡುವಿಯೇಕೆ ಕೋಪದಲ್ಲಿ ಕುಯ್ದ ಮೂಗು ಶಾಂತವಾದರೆ ಬರುವುದೇ

ಲೋಭಿ ನೀ ಆಗುವಿಯೇಕೆ ಭೂಮಿಗೆ ಬರುವಾಗಲೂ ಇಲ್ಲಿಂದ ಹೋಗುವಾಗಲೂ ನೀ ಬರಿಗೈದಾಸ

ಹೆಣ್ಣು ಹೊನ್ನು ಮಣ್ಣಿನ ಮೋಹವೇಕೆ ಬರುವಾಗಲೂ ನೀ ಒಂಟಿ ಹೋಗುವಾಗಲೂ ನೀ ಒಂಟಿ ನಿನ್ನ ಹಿಂದೆ ಬರುವುದು ನೀ ಮಾಡಿದ ಪುಣ್ಯವೊಂದೇ

ವಿದ್ಯೆಯ ಮದ ಧನ ಕನಕ ಅಧಿಕಾರದ ಮದವೇಕೆ ಎಲ್ಲವನ್ನೂ ನೀಡಿರುವವನೇ ನಗುತ್ತ ಸುಮ್ಮನಿರುವಾಗ

ಮತ್ಸರದ ಕೆಟ್ಟ ಹೊಗೆಯು ನಿನ್ನ ಮನದಲ್ಲೇಕೆ ಅದು ಬೆಂಕಿಯಾಗಿ ನಿನ್ನನ್ನೇ ಆಹುತಿ ಪಡೆಯುವಾಗ

ಎಲ್ಲ ಅರಿಷಡ್ವರ್ಗಗಳ ಮೇಲೆ ನೀ ಯುದ್ಧ ಸಾರಬಾರದೇಕೆ? ಎಲ್ಲ ಮೆಟ್ಟಿ ನೀ ನಿಲ್ಲಬಾರದೇಕೆ? ಮತ್ತೊಬ್ಬ ಬುದ್ಧ ಮಹಾವೀರ ನೀ ಆಗಬಾರದೇಕೆ?

ತಾಯಿ ನಿನ್ನ ಋಣ

ನವಮಾಸಗಳು ಎನ್ನ ಹೊತ್ತು, ನೋವನ್ನೆಲ್ಲ ನೀನೊಬ್ಬಳೇ ನುಂಗಿ ಹೆತ್ತು, ನಿನ್ನ ಕರುಳಬಳ್ಳಿಯ ಸುತ್ತಿಕೊಂಡು ಬಂದ ನನ್ನ ಕಂಡು ಮುಗುಳ್ನಕ್ಕೆಯಲ್ಲ ತಾಯಿ, ನಿನ್ನ ಋಣ ಹೇಗೆ ತೀರಿಸಲಿ?

ನಾ ಅತ್ತಾಗ ನೀ ಸಂಕಟಪಟ್ಟು ನಾ ನಕ್ಕಾಗ ನೀ ಸಂತಸಪಟ್ಟು ನನ್ನ ತಪ್ಪುಗಳನ್ನೆಲ್ಲ ನಯವಾಗಿ ತಿದ್ದಿ ನನ್ನ ಏಳ್ಗೆಗಾಗಿ ಶ್ರಮಿಸಿದ ತಾಯಿ, ನಿನ್ನ ಋಣ ಹೇಗೆ ತೀರಿಸಲಿ?

ನಾ ಗೆದ್ದಾಗ ನೀ ಜೊತೆಯಿದ್ದು ಸಂಭ್ರಮಪಟ್ಟು ನಾ ಸೋತಾಗ ನೀ ಜೊತೆಯಿದ್ದು ಧೈರ್ಯ ಹೇಳಿ ನನ್ನ ಆಯ್ಕೆಗಳಿಗೆ ಸಮ್ಮತಿಯಿತ್ತ ತಾಯಿ, ನಿನ್ನ ಋಣ ಹೇಗೆ ತೀರಿಸಲಿ?

ನನ್ನ ಆಸೆಗಳಿಗೆಂದೂ ನೀ ತಣ್ಣೀರೆರಚಲಿಲ್ಲ ನನ್ನ ಭಾವನೆಗಳಿಗೆ ನೀ ಸ್ಪಂದಿಸಿದೆಯಲ್ಲ ನನ್ನ ಹೃದಯದಲ್ಲಿ ನಿನಗಿರುವ ಸ್ಥಾನಕ್ಕಿಂತ ಮಿಗಿಲಾದ ಸ್ಥಾನ ನಿನ್ನ ಹೃದಯದಲ್ಲಿ ನನಗಿತ್ತೆಯಲ್ಲ ತಾಯಿ, ನಿನ್ನ ಋಣ ಹೇಗೆ ತೀರಿಸಲಿ?

ನಾ ನಿನ್ನ ನೆನೆಯಲಿ ನೆನೆಯದಿರಲಿ ನೀ ನನ್ನ ಸದಾ ನೆನೆದೆಯಲ್ಲ ನಾ ನಿನ್ನ ಬಗ್ಗೆ ಕರುಣೆ ತೋರಲಿ ತೋರದಿರಲಿ ನೀ ನನಗೆ ಕರುಣಾಮಯಿಯಾದೆಯಲ್ಲ ತಾಯಿ, ನಿನ್ನ ಋಣ ಹೇಗೆ ತೀರಿಸಲಿ?

ನಾ ನಿನ್ನ ಬಗ್ಗೆ ಯೋಚಿಸದಿದ್ದರೂ ನೀ ನನ್ನ ಬಗ್ಗೆಯೇ ಚಿಂತಿಸಿದೆ ನಿನ್ನ ಬಳಿ ಇರುವಷ್ಟು ನಿಷ್ಕಲ್ಮಶ ಪ್ರೀತಿ ನನ್ನ ಬಳಿ ಇಲ್ಲವಲ್ಲ ತಾಯಿ, ನಿನ್ನ ಋಣ ಹೇಗೆ ತೀರಿಸಲಿ?

ನಿನ್ನ ಋಣ ತೀರಿಸಲು ಮುಂದಿನ ಜನ್ಮದಲ್ಲೂ ನಿನ್ನ ಹೊಟ್ಟೆಯಲ್ಲೇ ಹುಟ್ಟಿ ಬರಲೇ? ಆಗಲಾದರೂ ಋಣಸಂದಾಯವಾಗುವುದೇ?

ತಾಯಿ, ನಿನ್ನ ಋಣ ತೀರಿಸಲು ಸಾಧ್ಯವೂ ಇಲ್ಲ, ಅದು ತೀರಿಸಲು ಸಾಲವೂ ಅಲ್ಲ

ತಾಯಿ, ನಿನ್ನ ಋಣ ತೀರಿಸಲಾರೆ 

ಕ್ಷಮೆಯಿರಲಿ

ದೇವರೇ,

ಕ್ಷಮೆಯಿರಲಿ ಎಲ್ಲದಕ್ಕೂ ಕ್ಷಮೆಯಿರಲಿ ಎಲ್ಲ ತಪ್ಪಿಗೂ ಕ್ಷಮೆಯಿರಲಿ

ಇಂದು ನಾ ನನ್ನ ಕರ್ತವ್ಯ ನಿಭಾಯಿಸದೇ ಹೋದೆ ಕ್ಷಮೆಯಿರಲಿ

ಕಾರಣ, ಎಂದಿಗಿಂತ ಇಂದು ನಾ ಆಲಸಿಯಾಗಿದ್ದೆ ಕ್ಷಮೆಯಿರಲಿ

ಉಂಡ ಅನ್ನ ಜೀರ್ಣಿಸುವ ಗೋಜಿಗೂ ಹೋಗಲಿಲ್ಲ ಕ್ಷಮೆಯಿರಲಿ

ಇಂದು ನಾ ಆಡಿದ ತಪ್ಪು ನುಡಿಗಳಿಗೆ ಕ್ಷಮೆಯಿರಲಿ ನನ್ನಿಂದ ಬೇರೊಬ್ಬರ ಮನ ನೊಂದಿದ್ದರೆ ಕ್ಷಮೆಯಿರಲಿ ನನ್ನಿಂದ ತಿಳಿದೂ ತಿಳಿಯದೆಯೂ ಆದ ತಪ್ಪುಗಳಿಗೆ ಕ್ಷಮೆಯಿರಲಿ

ಇಂದಿನ ನನ್ನ ನೆಡವಳಿಕೆಗೆ ಕ್ಷಮೆಯಿರಲಿ ಕೋಪಗೊಂಡಿದ್ದಕ್ಕೆ ಕ್ಷಮೆಯಿರಲಿ ಅಹಂಕಾರ ಪಟ್ಟಿದ್ದರೆ ಕ್ಷಮೆಯಿರಲಿ

ಇಂದು ನನ್ನಿಂದಾದ ಎಲ್ಲ ತಪ್ಪು ಘಟನೆಗಳಿಗೂ ಕ್ಷಮೆಯಿರಲಿ ಕ್ಷಮಿಸಲಾರದ ತಪ್ಪುಗಳಿಗೂ ಕ್ಷಮೆಯಿರಲಿ ಆ ಕ್ಷಮಾಗುಣ ನಿನ್ನಲ್ಲಿರಲಿ

ಮುಂದೆ ಈ ರೀತಿ ಕ್ಷಮೆ ಕೋರುವ ಪ್ರಮೇಯ ಬಾರದಿರಲಿ ಹಿಂದಿನ ತಪ್ಪುಗಳು ಪುನರಾವರ್ತನೆ ಆಗದಿರಲಿ ನಾಳೆ ಹೊಸಬೆಳಕು ಮೂಡಿಬರಲಿ ಈಗಂತು ಕ್ಷಮೆಯಿರಲಿ ನಿನ್ನ ಕ್ಷಮೆಯಿರಲಿ

Monday, September 14, 2020

ಕಡಲು

ಕಿನಾರೆಯಲ್ಲಿ ನಿಂತು ಮೊದಲು ನಿನ್ನ ಕಂಡಾಗ ಮನದಲ್ಲಿ ಉಲ್ಲಾಸದ ಅಲೆಗಳು ಮೂಡಿತಾಗ

ಅಲೆಅಲೆಯಾಗಿ ನೀ ಬಂದು ಕಾಲುಗಳ ಸೋಕಲು ನೀಡಿತು ರೋಮಾಂಚನ ತನುಮನಕೆ ಮೊದಮೊದಲು

ಒಮ್ಮೆ ಚಿಕ್ಕ ಅಲೆ ಒಮ್ಮೆ ದೊಡ್ಡ ಅಲೆ

ನಿನಗೆ ಸಂತಸವೋ ಅಥವಾ ದುಃಖವೋ ಇದು ಯಾವುದರ ಪ್ರತೀಕವೋ ನಾನರಿಯೆ

ಮೊದಲು ನೀ ಶಾಂತಮೂರ್ತಿಯಂತೆ ಕಂಡುಬಂದರೂ 

ನಂತರ ಕಂಡುಬಂದಿತು ನಿನ್ನ ರೌದ್ರರೂಪ 

ನೀನಂತೂ ನನಗೆ ಬಿಡಿಸಲಾಗದ ಒಗಟು

ನಿನ್ನಲ್ಲಿ ಅಡಗಿವೆ ವಿಧವಿಧ ಜೀವರಾಶಿಗಳು ನೀ ಕರುಣಾಮಯಿ ಎನ್ನಲೇ? ಅಥವಾ ನಿನ್ನ ವಿಕೋಪಕ್ಕೆ ಬಲಿಯಾಗಿ ಹೆಣವಾಗಿರುವ ರಾಶಿ ರಾಶಿ ಜೀವಗಳ ಕಂಡು ಜಲರಾಕ್ಷಸ ಎನ್ನಲೇ?

ಆದರೂ ನಿನ್ನ ನೋಟ ಬಲು ಚೆಂದ

ನಿನಗಿದೆ ನಿನ್ನದೇ ಆದ ಅಂದ

ನಿನ್ನೊಳಗೆ ಅವಿತುಕೊಳ್ಳಲು ಮುನ್ನುಗ್ಗುತ್ತಿರುವ ಸೂರ್ಯನ ಕಂಡಾಗಲಂತೂ ಮನಕೆ ಆನಂದ

ನಿನ್ನ ಸಹವಾಸದಲ್ಲಿ ಏನೋ ಒಂದು ರೀತಿಯ ನೆಮ್ಮದಿ

ದೂರವಾಗಿದೆ ದುಃಖ ದುಮ್ಮಾನಗಳು 

ನಿನ್ನಲ್ಲಿರುವ ಉಪ್ಪು ನೀರಂತೆ ಗಡಸಾಗಿದ್ದ ಮನವು ಈಗ ತಿಳಿಯಾಗಿದೆ

ಓ ಶರಧಿ, ಅರಿತವರು ಯಾರು ನಿನ್ನ ಪರಿಧಿ ಒಂದಂತೂ ನಿಜ ನಿನಗೂ ಈ ಮನಕ್ಕೂ ಏನೋ ಸಾಮ್ಯತೆ ಅದಕ್ಕೆ ಇರಬೇಕು ನೀನೀ ಮನಕ್ಕೆ ಹತ್ತಿರ 

ಕವಿ

ಮನಸ್ಸಿಗೆ ತೋಚಿದ್ದು ಗೀಚುತ್ತ ಕವಿಯಾದವನು 

ಓದುಗರ ಮನದಲ್ಲಿ ಚಿತ್ರ ಬರೆಯುವ ಚಿತ್ರಕಾರನಾದ

ಆ ಕ್ಷಣ ದುಃಖ ಮಾಯ ಮಾಡುವ ಜಾದೂಗಾರನಾದ

ನೋವನ್ನು ಗುಣಪಡಿಸುವ ಮನೋವೈದ್ಯನಾದ

ಯೋಚಿಸುವಂತೆ ಮಾಡುತ್ತ ತಲೆಗೆ ಕೆಲಸ ನೀಡುವ ಕಾರ್ಮಿಕ ಮುಖಂಡನಾದ

ಭಾವನೆಗಳಿಗೆ ಆಕಾರ ಕೊಡುತ್ತ ಶಿಲ್ಪಿಯಾದ

ಕನಸುಗಳ ಕಟ್ಟಲು ಕೈಜೋಡಿಸಿ ಅಭಿಯಂತರನಾದ

ಸಾರಾಂಶ ಮನದಲ್ಲಿ ನಿಲ್ಲುವಂತೆ ಮಾಡಿ ಛಾಯಾಗ್ರಾಹಕನಾದ

ಅಭಿಪ್ರಾಯಗಳ ಹದಗೊಳಿಸುವ ಚಮ್ಮಾರನಾದ

ಬದುಕಿನ ಪಾಠ ಕಲಿಸುತ್ತ ಶಿಕ್ಷಕನಾದ

ಮನದಲ್ಲಿ ಸಂತಸದ ಹೂವರಳಿಸಿ ಹೂಮಾಲಿಯಾದ

ಕನಸುಗಳ ಬಿತ್ತುವ ಕನಸುಗಾರನಾದ

ಏನೆಲ್ಲಾ ಆದ ಒಬ್ಬ ಕವಿಯು!

ಕೋರಸ್ ಆಫ್ ಐಯಸ್ ಗರ್ಲ್ಸ್

ಬರುತ್ತಿರುವಳು ಹಂಸನಡಿಗೆಯಲಿ 

ಆ ಶ್ವೇತ ಸುಂದರಿ ಆ ರಮ್ಯ ಸುಂದರಿ

ಲತೆಯಂತೆ ಅವಳ ಮೈಮಾಟ

ಅವಳ ಕಣ್ಣುಗಳು ನುನುಜಾಕ್ಷಿ

ಬಹಳ ಸುಂದರ ಅವಳ ನೋಟ

ಯಾರೀ ರೂಪಸಿ?

ಅನುಪಮ ಸೌಂದರ್ಯರಾಶಿ

ಈ ಭೂಮಿಯಲಿ

ಬರುತ್ತಿರುವಳು ಹೆಜ್ಜೆಯ ಮೇಲೆ ಹೆಜ್ಜೆ ಇಕ್ಕುತ

ಶ್ರೀವಳ್ಳಿ ಜಗದಾಂಬೆಯರ ಮನದಲಿ ನೆನೆಯುತ್ತ

ತನ್ನ ಮೃದುಲ ವಾಣಿಯಲಿ ದೇವರ ನಾಮ ಹಾಡುತ್ತ

ಬರುತ್ತಿರುವಳು ಕೊಳದತ್ತ

ಸರೋಜ ಪುಷ್ಪವ ಹುಡುಕುತ್ತ

ಚೈತ್ರ ಮಾಸದ ಸಂಧ್ಯಾಕಾಲದ ಪೂಜೆಗಾಗಿ

ನದಿಯ ತಟದ ಭವ್ಯ ದೇಗುಲದ

ಶಿಲ್ಪ ಸೌಂದರ್ಯವ ಮೆಲುಕುತ್ತ

ನಿಧಾನಗತಿಯಲಿ ಹೆಜ್ಜೆ ಇಕ್ಕುತ್ತ

ಬರುತ್ತಿರುವಳು ನಿರುಪಮ ಸುಂದರಿ

ಪೂರ್ಣಿಮೆಯ ದಿನದ ಬೆಳದಿಂಗಳು ಎಲ್ಲೆಲ್ಲೂ

ಆ ಶ್ವೇತ ಸುಂದರಿ ಬರುತ್ತಿರಲು

ಹಂಸ ನಡಿಗೆಯಲಿ ಬರುತ್ತಿರಲು

Friday, September 11, 2020

ವೈಶಾಖದ ಒಂದು ಸಂಜೆ

ಎಷ್ಟು ಸುಂದರ ವೈಶಾಖದ ಈ ಸಂಜೆ, ನಂಬಲಾಗುತ್ತಿಲ್ಲ ಇದು ಬೇಸಿಗೆಕಾಲ 

ಸತತವಾಗಿ ಮೈ ಸೋಕುತ್ತಿಹ ತಂಗಾಳಿ 

ಜೊತೆಗೆ ನದಿಯ ಝುಳು ಝುಳು ನಾದವ ಕೇಳಿ ಮನದ ಬಿಸಿಯು ಬೇಗುದಿಯು ಎತ್ತಲೋ ಮಾಯ

ನಿಜ, ಮುಂಜಾನೆಯಿಂದ ಬಳಲಿ ಬೆಂಡಾಗಿದ್ದ ಇಳೆಯ ಬಗ್ಗೆ ಈಗಲಾದರೂ ಕನಿಕರ ಮೂಡಿತೇನೋ ಆ ರವಿಗೆ

ಅದಕ್ಕಾಗಿಯೇ ಮರೆಯಾಗುತ್ತಿದ್ದಾನೆ ಆ ಬೆಟ್ಟಗಳ ಮಧ್ಯೆ ತನ್ನ ಗೆಳೆಯ ಶಶಿಯ ಕಳುಹಿಸಲು ಇಳೆಗೆ ತಂಪನ್ನೀಯಲು

ನದಿಯ ದಡದಲ್ಲಂತೂ ಇನ್ನೂ ಸುಂದರ ನೋಟ ಪಚ್ಛೆತೆನೆಗಳ ಬಳುಕುವ ಮೈಮಾಟ

ಹಸಿರು ಗದ್ದೆಗಳ ಸುತ್ತಲೂ ತೆಂಗುಕಂಗುಗಳ ಜೋಕಾಲಿ ಆಟ ಹತ್ತಿರದಲ್ಲೇ ಎಲ್ಲೋ ಕಂಪು ಸೂಸುವ ಹೂದೋಟ 

ಮುಗಿಲಲ್ಲಿ ಬೆಳ್ಳಕ್ಕಿಗಳ ಚಿತ್ತಾರ ಗೂಡು ಸೇರುವ ತವಕದಿ ಸಾಗಿವೆ ಬಹುದೂರ ಅವುಗಳ ಕಲರವದಲ್ಲಿ ಎಂಥದೋ ಮಾಧುರ್ಯ ಭೂತಾಯಿಯೇ ವರ್ಣಿಸಲಸದಳ ನಿನ್ನೀ ಸೌಂದರ್ಯ ಮೆಚ್ಚಲೇಬೇಕು ಸೃಷ್ಟಿಕರ್ತನ ಚಾತುರ್ಯ

ಕಣ್ಣಿಗೆ ಕಟ್ಟಿದೆ ಸುತ್ತಲಿನ ಈ ಹಸಿರು ಮೇಲೆ ನೋಡಿದರೆ ಆಗಸವು ನೀಲಿ 

ತಾಯೆ, ನೀ ವರ್ಣರಂಜಿತೆ ನಿನ್ನ ಮಡಿಲಲ್ಲಿ ನಾ ಪಡೆದೆ ಧನ್ಯತೆ

ಆತ್ಮೀಯತೆ

ಒಂದು ಆತ್ಮೀಯ ನೋಟ ಒಂದು ಆತ್ಮೀಯ ನಗು ಎಂಥವರನ್ನೂ ಸೆಳೆಯಬಲ್ಲದು

ಒಂದು ಆತ್ಮೀಯ ಸ್ಪರ್ಶ ಒಂದು ಆತ್ಮೀಯ ಅಪ್ಪುಗೆ ಮನದ ದುಗುಡ ದೂರ ತಳ್ಳುವುದು

ಒಂದು ಆತ್ಮೀಯ ಪತ್ರ ಒಂದು ಆತ್ಮೀಯ ಮಾತುಕತೆ ಸ್ನೇಹದ ಬುನಾದಿ ಭದ್ರಗೊಳಿಸುವುದು

ಒಂದು ಆತ್ಮೀಯ ಸಂಬಂಧ ಒಂದು ಆತ್ಮೀಯ ಅನುಬಂಧ ಎಲ್ಲ ಮೆಟ್ಟಿ ನಿಲ್ಲುವುದು

ಒಂದು ಆತ್ಮೀಯ ಭಾವನೆ ಒಂದು ಆತ್ಮೀಯ ಕಲ್ಪನೆ ಹೃದಯಾಂತರಾಳದಲಿ ಸ್ಥಾನ ಪಡೆಯುವುದು

ನೆಮ್ಮದಿ

ಬಹಳ ದಿನಗಳಾಯ್ತು ನೀ ಕಾಣೆಯಾಗಿ ಈ ಮನದಿಂದ ನೀ ದೂರಾಗಿ ಎತ್ತ ಹೋದೆಯೋ ಕಾಣೆ ನೀನಿರದೆ ನನ್ನಾಣೆ ಈ ಬದುಕು ದುಸ್ತರ

ಅರ್ಧ ಆಯಸ್ಸು ಮುಗಿಯಿತು ನಿನ್ನ ಹುಡುಕಾಟದಲಿ ಈಗಲೂ ನಿನ್ನ ನಿರೀಕ್ಷೆಯಲ್ಲೇ ಈ ನೋಟ ಎತ್ತ ಹೂಡಿದೆಯೋ ನೀ ಓಟ

ನಿಜ! ನಿನಗಿದೆಲ್ಲವೂ ಹುಡುಗಾಟ

ಬಯಸಿದ್ದೆಲ್ಲವೂ ಬಳಿಯೇ ಇದ್ದರೂ ಮನಕೆ ನೀ ಇರದಿರೆ ಎಲ್ಲವೂ ವ್ಯರ್ಥ ನೀ ಇರದೇ ಸುಖವೂ ಕಳೆದುಕೊಳ್ಳುವುದು ತನ್ನ ಅರ್ಥ

ನೀ ಜೊತೆ ಇದ್ದಾಗ ಈ ಬಾಳು ಸುಂದರ ನಿನ್ನೊಂದಿಗೆ ಕಳೆದ ಕ್ಷಣಗಳು ಮಧುರಾತಿ ಮಧುರ ಆದರೆ ನೀ ಕೈಜಾರಿದ ಮೇಲಿಂದ ಎಲ್ಲವೂ ದುರ್ಬರ

ಎಲ್ಲಕ್ಕಿಂತ ಮಿಗಿಲಾದ ಸ್ಥಾನ ಈ ಮನದಲಿ ನಿನಗೆ ಆದರೂ ನೀ ಅದನು ಬಿಟ್ಟು ಹೊರ ನಡೆದೆ ಎಲ್ಲಿಗೆ? ನೀನಿರದೆ ನಾ ಒಂಟಿಯಾದೆ ಬೇಸರದಿಂದ ಹತಾಶಳಾದೆ ದಿಕ್ಕುತೋಚದೆ

ಈಗಲಾದರೂ ನೀ ಬಳಿಗೆ ಬಾರೆಯಾ ನನ್ನ ಮೇಲೊಂದಿಷ್ಟು ಅನುಕಂಪ ತೊರೆಯಾ

ನಿನಗಾಗಿ ನಾ ಕೊನೆವರೆಗೂ ಕಾಯುವೆ

ಓ ನೆಮ್ಮದಿಯೇ, ನೀ ಪುನಃ ಸಿಕ್ಕೇ ಸಿಗುವೆ ಎಂದು ನಂಬಿ

Thursday, September 10, 2020

ಸಾವು

ಪದವೇ ಎಷ್ಟು ಭಯಂಕರ, ಮನಸು ತಲ್ಲಣಗೊಳಿಸುವ ಶಬ್ದ

ಮನುಷ್ಯ ಚಟುವಟಿಕೆಯ ಚಿಲುಮೆ

ಸಾವು ಬಂದಾಗ ಎಲ್ಲ ಸ್ತಬ್ಧ

ಎಲ್ಲರ ಮಧ್ಯೆ ಸುಖದಿಂದಿದ್ದವ

ಯಾರೂ ಕಾಣದ ನಿಗೂಢ ಜಗತ್ತಿಗೆ ಪಯಣಿಸುವ

ಮನಕೆ ಹತ್ತಿರದವರ ಸಾವು ನೀಡುವುದು ಅಸಾಧ್ಯ ನೋವು ಕೊನೆಯವರೆಗೂ

ಆದರೆ, ಶೋಕ ಕೆಲವು ದಿನಗಳು ಮಾತ್ರ

ದಿನಚರಿ ನಿಲ್ಲದು ಊಟ ತಿಂಡಿ ಸುಖನಿದ್ದೆ ತಪ್ಪದು

ನೆನಪೊಂದು ಆಗಾಗ ಕಾಡುವುದಷ್ಟೇ

ಅದು ಕೂಡ ಕ್ರಮೇಣ ಮುಸುಕು

ಮರೆವು ಒಂದು ವರವು

ಆದಿ ಅಂತ್ಯದಂತೆ ಬದುಕು ಸಾವು

ಹುಟ್ಟಿದ ಮೇಲೆ ಖಚಿತ ಸಾವು

ಯಾರು ಹೆದರರು ಸಾವಿಗೆ? ಯಾರಿಂದಲೂ ತಡೆಯಲಾಗದ ಚಿರನಿದ್ರೆಗೆ

ಸಾವಿರದ ಮನೆಯಿಂದ ಸಾಸಿವೆ ತಾ ಎಂದ ಬುದ್ಧ

ಸಾವಿರದ ಮನೆಯುಂಟೆ? ನೋವಿರದ ಬದುಕುಂಟೆ?

ಜೀವನವು ದೂರ ತೀರ ಯಾನವಂತೆ!

ಆ ದೂರ ತೀರ ಸಾವಿರಬಹುದೇ?

ಅನಿಶ್ಚಿತ

ಯಾವುದು ನಿಶ್ಚಿತ? ಹುಟ್ಟೇ ಸಾವೇ? 

ಇಂದು ಇದ್ದವರು ನಾಳೆ ಇರದಾಗ

ಎಲ್ಲವೂ ಕೈಮೀರಿದಾಗ ಬೇಸರ ಖಚಿತ

ಯಾವುದು ನಿಶ್ಚಿತ? ಕಷ್ಟವೇ ಸುಖವೇ?

ಸುಖಕ್ಕೆ ಬೆಲೆ ತೆರಬೇಕು ಕಷ್ಟಗಳು ಉಚಿತ

ಕಷ್ಟಗಳು ಮಿತಿಮೀರಿದಾಗ ಬೇಸರ ಖಚಿತ

ಯಾವುದು ನಿಶ್ಚಿತ? ಬದುಕೇ ಬವಣೆಯೇ?

ಲೆಕ್ಕಾಚಾರಗಳೆಲ್ಲ ತಲೆಕೆಳಗಾದಾಗ ಬೇಸರ ಖಚಿತ

ಗಾಯ

ಅಣೆಕಟ್ಟು ಕಟ್ಟಲಾದೀತೇ ಎಡಬಿಡದೆ ಸುರಿಯುತ್ತಿಹ ಈ ಕಣ್ಣೀರಿಗೆ ಹುಸಿ ಸಾಂತ್ವನದ ಮಾತುಗಳಿಂದ?

ಆಗಿಹೋದವು ಮಾಗಿಹೋದವು ದೇಹದ ಮೇಲಾದ ನೂರಾರು ಗಾಯಗಳು

ಮನದ ಮೇಲಾದ ಈ ಒಂದು ಗಾಯ ಮಾತ್ರ ಮಾಗದೆ ಒಣಗದೆ ಹಚ್ಚ ಹಸಿರಾಗಿದೆ

ಹಾಸು ಹೊಕ್ಕಿದೆ ನಿನ್ನ ಮನದಲ್ಲೊಂದು ಭೂತ

ಅದೇ ಅನುಮಾನ

ನಿನಗಾದರೂ ತಿಳಿಯದೇ?

ನಾನು ಪವಿತ್ರ ಅಗ್ನಿಗೆ ಸಮಾನ

ನಿಜವಾದ ಪ್ರೀತಿ ನಂಬಿಕೆಗಳೇ ಈ ಗಾಯಕ್ಕೆ ಮುಲಾಮು ಅದೇ ಔಷಧಿ

ನಿನಗೊಂದು ತಿಳಿಯಲಿ ಗೆಳೆಯ ನಿನ್ನ ಬಳಿಯೇ ಇದೆ ಆ ಔಷಧಿ ಎಂಬ ನಿಧಿ

ಮುಗುಳ್ನಗು

ಒಂದು ಮುಗುಳ್ನಗು

ಇಬ್ಬರು ಅಪರಿಚಿತರ ಪರಿಚಯಕ್ಕೆ ನಾಂದಿ ಹಾಡುವುದು

ಸ್ನೇಹದ ಮೊದಲ ಮೆಟ್ಟಿಲಾಗುವುದು

ಗಂಟಿಕ್ಕಿದ್ದ ಹುಬ್ಬುಗಳ ನೇರಗೊಳಿಸುವುದು

ಕ್ಲಿಷ್ಟ ವಾತಾವರಣವನ್ನು ತಿಳಿಗೊಳಿಸುವುದು

ಎರಡು ಹೃದಯಗಳನ್ನು ಬೆಸೆಯುವುದು

ಮನಸ್ಸಿಗೆ ಮುದ ನೀಡುವುದು

ಪ್ರೀತಿಯ ರಾಗ ಹಾಡುವುದು

ಎರಡು ದಡಗಳನ್ನು ಒಂದಾಗಿಸುವುದು

ನಂಬಿಕೆಯ ದೃಢಗೊಳಿಸುವುದು

ಆತ್ಮೀಯತೆ ಮೂಡಿಸುವುದು

ಬೆಳದಿಂಗಳ ಚೆಲ್ಲುವುದು

ತನ್ನ ಮುಗ್ಧತೆಯಿಂದ ಸೆಳೆಯುವುದು

ನೋವನ್ನು ಮರೆಸುವುದು

ನೆಮ್ಮದಿಯ ನೀಡುವುದು

ಧನ್ಯತೆಯ ಭಾವ ಮೂಡಿಸುವುದು

ದುಗುಡವ ಹೊರದೂಡುವುದು

ವಜ್ರಕ್ಕಿಂತ ಬೆಳೆಬಾಳುವುದು

ಸಾಂಕ್ರಾಮಿಕವಾಗಿ ಹರಡುವುದು

ಜಗವನ್ನೇ ಗೆಲ್ಲುವುದು


ಮಣ್ಣಿನಮಗ

ಮುಂಜಾನೆಯೇ ನೇಗಿಲೊಡಗೂಡಿ ಹೊರಟವ ದಿನವೆಲ್ಲಾ ದುಡಿದು ದಣಿದು ಮುಸ್ಸಂಜೆಗೆ ವಾಪಾಸಾಗುವವ

ಇವನೇ ರೈತ

ಅವನ ಸಣಕಲು ದೇಹಕ್ಕೆ ಪೈಪೋಟಿ ಆ ಬಡಕಲು ಎತ್ತುಗಳು ಮುರುಕಲು ಗುಡಿಸಲು

ತನ್ನ ಬಡತನಕ್ಕೆ ಸಾಕ್ಷಿಯಂತೆ

ತಾನು ಹೊಟ್ಟೆಗೆ ತಣ್ಣೀರು ಬಟ್ಟೆ ಕಟ್ಟಿ ನಮ್ಮೆಲ್ಲರ ಹೊಟ್ಟೆ ತುಂಬಿಸುವ

ಭೂತಾಯಿಯ ಸೇವೆಗೈಯುತ ಅವಳ ಋಣ ತೀರಿಸುವ

ಪ್ರತಿ ತಾಯಿ ತನ್ನ ಕಂದನಿಗೆ ನೀಡುವಳು ಕೈತುತ್ತು ಅಡಗಿದೆ ಅದರ ಹಿಂದೆ ರೈತನ ಶ್ರಮ ಕಸರತ್ತು

ಕೈಕೆಸರಾದರೆ ಬಾಯಿ ಮೊಸರು ಎಂಬುದು ಅವನ ಬೀಜಮಂತ್ರ

ಅದರಂತೆ ನಡೆಯುವನು ಕಷ್ಟಪಟ್ಟು ಆದರೂ ಇವನ ಬಾಳು ಅತಂತ್ರ

ಮಳೆಯಿರಲಿ ಚಳಿಯಿರಲಿ ಬಿರುಗಾಳಿ ಬೀಸಲಿ ರಣಬಿಸಿಲೇ ಬರಲಿ ಅಳುಕಿಲ್ಲ ಅಂಜಿಕೆಯಿಲ್ಲ ಮೈ ಬಗ್ಗಿಸಿ ದುಡಿಯುವುದ ನಿಲ್ಲಿಸುವುದಿಲ್ಲ

ತನ್ನ ಕಷ್ಟಕ್ಕೆ ಪ್ರತಿಫಲ ಸಿಗದಿದ್ದರೂ ನಂಬಿದ ಕಾಯಕ ತೊರೆಯುವುದಿಲ್ಲ

ವರುಣದೇವನ ಕೃಪೆ ಅಲ್ಪವಿದ್ದರೂ ಅವನ ನಂಬುವುದ ಮರೆಯುವುದಿಲ್ಲ

ಮಣ್ಣಿನ ಸೇವೆಗೈಯುತ್ತ ಮಣ್ಣಲ್ಲಿ ಮಣ್ಣಾಗುವ ಇವನೇ ನಿಜವಾದ ಮಣ್ಣಿನಮಗ

ವೀರಯೋಧ

ಹಿಮಾಲಯದ ತುದಿಯಲ್ಲೋ ರಾಜಸ್ಥಾನದ ಬಂಜರು ನೆಲದಲ್ಲೋ ಅಥವಾ ಅಸ್ಸಾಮಿನ ಗಡಿಪ್ರದೇಶದಲ್ಲೆಲ್ಲೋ ಕಂಡೆ ನಿನ್ನ ಓ ವೀರಯೋಧ

ಆ ಮಂಜಿನ ಚಲಿಯಲ್ಲೂ ನಿನ್ನ ನೆತ್ತರು ಕುದಿಯುತ್ತಿದೆ ಕೆಚ್ಚು ಹೆಚ್ಚುತ್ತಿದೆ ವೈರಿಯ ಸಧೆ ಬಡಿಯಲು

ಆ ಬಿಸಿಲಲ್ಲೂ ನಿನ್ನ ಕೈಗಳು ಮರಗಟ್ಟಿವೆ ಬಂದೂಕು ಹಿಡಿದು ಹಿಡಿದು

ನಿನ್ನ ಪ್ರೀತಿಸುವವರೆಲ್ಲರಿಂದ ದೂರಾಗಿ ದೇಶದ್ರೋಹಿಗಳನ್ನು ಮಟ್ಟಹಾಕಲು ಸನ್ನದ್ಧನಾಗಿರುವೆ

ನಿನ್ನಲ್ಲಿ ಕಾಣುತ್ತಿದೆ ನನಗೆ ಛಲ ಸ್ವಾಭಿಮಾನ, ಹೋರಾಡಲು, ಗುರಿ ತಲುಪಲು

ನಿನ್ನ ಮುಖದ ತೇಜಸ್ಸು, ಅದು ಸೂರ್ಯನಿಗಿಂತಲೂ ಪ್ರಕಾಶಮಾನ

ನಿನ್ನ ಶೌರ್ಯ ಧೈರ್ಯಗಳಿಗಿಲ್ಲ ಯಾರೂ ಸಮಾನ

ನಿನಗೆ ನೀನೇ ಸರಿಸಾಟಿ

ನಾಡಿನಲ್ಲಿ ಶಾಂತಿ ನೆಮ್ಮದಿ ನೆಲೆಸಲು ನೀನೇ ಮುಖ್ಯ ಕಾರಣ

ಕೊನೆಗೊಂದು ದಿನ ನೀ ಅಪ್ಪುವೆ ವೀರಮರಣ

ಭಾರತಾಂಬೆಯ ಋಣ ತೀರಿಸಲು

ಆದರೆ, ನೀ ಮರೆತೆ ನಿನ್ನ ಹೆತ್ತವ್ವನ ಋಣ ತೀರಿಸಲು

ಹೋಗುವೆ ನೀ ಕೈ ಹಿಡಿದವಳಿಗೆ ವೈಧವ್ಯ ಗಟ್ಟಿಗೊಳಿಸಿ, ನಿನ್ನ ಮಕ್ಕಳ ಅನಾಥರನ್ನಾಗಿಸಿ

ಭೂತಾಯಿಗೆ ನೆತ್ತರ ಅಭಿಷೇಕ ಮಾಡುತ್ತ

ಎಲ್ಲರಿಗೂ ಯುದ್ಧ ಬಂದಾಗ ಮಾತ್ರ ನೆನಪಾಗುವನು ಸೈನಿಕ

ಬೇರೆ ಸಮಯದಲ್ಲಲ್ಲ, ಎಂಥಾ ದುರಂತ!

ಹೇ ವೀರಯೋಧ, ದೇಶರಕ್ಷಕ

ನೀ ಧನ್ಯ ನೀ ಬಲು ಮಾನ್ಯ

ಏಕೆಂದರೆ ಕೊನೆಯ ಉಸಿರಿರುವವರೆಗೂ ತೊರೆಯಲಿಲ್ಲ ಮರೆಯಲಿಲ್ಲ ನೀ ನಿನ್ನ ಕರ್ತವ್ಯ

Wednesday, September 9, 2020

ನಿರಾಸೆ

ಏಕೋ ಕಾಣೆ ಮನವಿಂದು ಬಾಡಿದೆ ಮೌನವು ಬಿಡದೆ ಕಾಡಿದೆ

ಹೆಚ್ಚಿರುವ ಒತ್ತಡದ ಪರಿಸ್ಥಿತಿ ಅದರಿಂದಲೇ ಇರಬಹುದು ಇಂಥ ದುಸ್ಥಿತಿ

ಮನುಷ್ಯರೆಂದರೇ ಮೂಡಿದೆ ಬೇಸರ ಎಲ್ಲ ಬಂಧನಗಳಿಂದಲೂ ದೂರ ಓಡಲು ಮನಕೆ ಆತುರ

ಈಗ ಅರಿವಾಗಿದೆ ಎಲ್ಲವೂ ನಶ್ವರ ಅನಿಸುತ್ತಿದೆ ದಿನದಿನಕ್ಕೂ ಜೀವನ ಬಹಳ ದುಸ್ತರ

ಆದಿ ಅಂತ್ಯವಿರದ ಈ ಜಂಜಾಟ ಇದರಿಂದ ನನ್ನ ಬಾಳಾಗಿದೆ ದೊಂಬರಾಟ

ಜಲಧಾರೆ

ಆಗಸದೆತ್ತರದಿಂದ ಧುಮ್ಮಿಕ್ಕುತ್ತಿರುವ ಜಲಧಾರೆಯೇ ಅರಣ್ಯದ ಹಾದಿಯಲ್ಲಿ ಸಂಚರಿಸಿ ಬರುವ ವನಸ್ಪತಿಯ ಭಂಡಾರವೇ

ಸ್ವಚ್ಚಂದವಾಗಿ ಇಳಿಯುತ್ತಿರುವ ಶ್ವೇತವಸ್ತ್ರಧಾರಿಣಿಯೇ ಗಾಂಭೀರ್ಯದಿಂದ ಬಳುಕುತ್ತ ಬರುವ ವಯ್ಯಾರಿಯೇ

ನಿನ್ನ ಇರುವಿಕೆಯಿಂದ ವಾತಾವರಣವೆಲ್ಲ ಸುಮನೋಹರವೇ

ಭೂತಾಯಿಯ ಹಸಿರಿನ ಮಧ್ಯೆ ನೀ ಎದ್ದು ಕಾಣುವೆ ಮನಮೋಹಿನಿಯೇ

ನೊರೆ ಹಾಲಿನಂತೆ ಉಕ್ಕುತ್ತ ಸೇರುವೆ ತೊರೆಯನ್ನೇ ನಿನ್ನ ಅಂದ ಏನೆಂದು ವರ್ಣಿಸಲಿ ಅಪ್ರತಿಮ ಸುಂದರಿಯೇ

ಕಣ್ತುಂಬಿ ಬರುತ್ತಿದೆ ನಿನ್ನೀ ನೋಟದಿಂದ ಗಂಧರ್ವ ಕನ್ಯೆಯೇ ನೀ ಬರೀ ನೀರಲ್ಲ ಶಿವನ ಜಟೆಯಿಂದ ಹರಿದು ಬರುತ್ತಿರುವ ಭಾಗೀರಥಿಯೇ

Tuesday, September 8, 2020

ವಿಚ್ಛೇದನ

ಜೀವನವೆಂಬ ಮಹಾಸಾಗರದಲ್ಲಿ ಪಯಣಿಸುವಾಗ ಆ ದೇವರು ನನ್ನ ಸಹಪ್ರಯಾಣಿಕಳಾಗಿ ನಿನ್ನ ಆರಿಸಿದ

ಆದರೆ, ಇಷ್ಟು ವರ್ಷಗಳ ಪಯಣದಲ್ಲಿ ನನ್ನ ಅಂತರಂಗದ ಪಿಸುಮಾತುಗಳು ನಿನ್ನ ಕಿವಿ ತಲುಪಲಿಲ್ಲ

ನಿನ್ನ ಮನದಾಳದ ಬಯಕೆಗಳು ನನ್ನ ಅರಿವಿಗೆ ಬರಲಿಲ್ಲ

ನಮ್ಮಿಬ್ಬರ ಭಾವನೆಗಳು ಒಬ್ಬರಿಗೊಬ್ಬರಿಗೆ ಅರ್ಥವಾಗಲೂ ಇಲ್ಲ

ನಾವಿಬ್ಬರೂ ಅಪರಿಚಿತರಾಗಿಯೇ ಉಳಿದೆವು

ಭಿನ್ನಾಭಿಪ್ರಾಯ ಎಂಬ ಅಡ್ಡಗೋಡೆಯೊಂದು ಧುತ್ತನೆ ಎದ್ದು ನಿಂತಿದೆ ನಮ್ಮ ಮಧ್ಯೆ

ನಂಬಿಕೆ ವಿಶ್ವಾಸಗಳು ಕೂಡ ನಿಧಾನವಾಗಿ ಕ್ಷೀಣಿಸಲು ಹೊರಟಿದೆ

ಪ್ರೀತಿ ಎಂಬ ಅಮೃತವೆಂದೋ ಹಾಲಾಹಲವಾಗಿ ಹೃದಯ ಹಿಂಡಿದೆ

ನನ್ನ ಬಾಳ ಸಖಿಯಾಗಿ ನೀ ಬಾರದೆ

ಮುಳ್ಳಾಗಿ ಬಂದು ಚುಚ್ಚಿದೆ ಮನವ

ನಾ ನೋವು ಅನುಭವಿಸುತ್ತಿರಲು

ನೀ ವಿಕೃತ ಆನಂದವ ಪಡೆದೆ

ಕೊನೆಗೊಮ್ಮೆ ನನಗರಿವಾಯಿತು ನಮ್ಮಿಬ್ಬರ ತೀರ ಬೇರೆ ಬೇರೆ ಎಂದು

ಒಂದೇ ನಾವೆಯಲ್ಲಿ ಅದ ತಲುಪುವುದು ಖಂಡಿತ ಅಸಾಧ್ಯ ಗೆಳತಿ

ಅದಕ್ಕಾಗಿ ಈ ನಿರ್ಧಾರ!

ಭಯ

ಭಯ ಭಯ
ಬೆಂಬಿಡದೆ ಭೂತವಾಗಿ ನನ್ನ ಆವರಿಸುತ್ತಿದೆ ಯಾರಿಗೂ ಕಾಣದೆ, ಯಾರ ಅರಿವಿಗೂ ಬಾರದೆ ನನಗೆ ಮಾತ್ರ ತಿಳಿಯುವಂತೆ ಆಕ್ರಮಿಸುತ್ತಿದೆ
ಎಲ್ಲಿ ಹೋದರೂ ಏನು ಮಾಡಿದರೂ ಬಿಡದೆ ಕಾಡುತ್ತಿದೆ ಈ ಭೂತ ಇರುವ ಅಲ್ಪಸ್ವಲ್ಪ ಧೈರ್ಯವ ಕಿತ್ತೊಗೆಯುತ
ಅದರಿಂದ ನಾ ದೂರ ಓಡಿದರೂ ನನ್ನ ಬಳಿಗೇ ಧಾವಿಸುತ್ತಿದೆ ನಿಧಾನವಾಗಿ ನನ್ನ ಮನದ ನೆಮ್ಮದಿಯ ಹದಗೆಡಿಸಲು ಸನ್ನಧ್ದನಾಗಿ
ಮುಂದೇನಾಗುವುದೋ ಎಂಬ ಭಯ, ಹಿಂದೆ ಆದ ಘಟನೆಗಳ ನೆನೆಸಿಕೊಂಡರೆ ಭಯ, ಇಂದಿನ ನನ್ನ ಸ್ಥಿತಿ ಕಂಡು ಭಯ
ಭಯ ಭಯ ಬರೀ ಭಯ
ಹೀಗೇ ಭಯ ಪಡುತ್ತಿದ್ದರೆ ತಪ್ಪಿದ್ದಲ್ಲ ಅಪಾಯ
ಭಯವೆಂಬ ಈ ಭೂತ ಮನದುದ್ದಗಲಕ್ಕೂ ತನ್ನ ಕರಾಳ ಹಸ್ತ ಚಾಚುತ್ತಿದೆ
ನನ್ನ ಸಂತಸವನ್ನೆಲ್ಲ ದರೊಡೆಕೋರನಂತೆ ಬಾಚುತ್ತಿದೆ
ನಿಜ, ನಾನೇ ಮಾಡಿದ ಕೆಲವು ತಪ್ಪುಗಳಿಂದ ಉದ್ಭವಿಸಿದೆ ಈ ಭಯ
ಆದರೆ, ನನ್ನದಲ್ಲದ ಕೆಲವು ತಪ್ಪುಗಳಿಗೂ ಭಯ ಪಡಬೇಕಾಗಿರುವುದು ಯಾವ ನ್ಯಾಯ!?
ದಿನೇ ದಿನೇ ಹೆಚ್ಚುತ್ತಿದೆಯೇ ವಿನಃ ತಗ್ಗುತ್ತಿಲ್ಲ
ನನಗೋ ಇದರ ಒತ್ತಡ ತಡೆದುಕೊಳ್ಳಲು ತಾಕತ್ತಿಲ್ಲ
ನನ್ನ ಅರ್ಧ ಆಯಸ್ಸನ್ನೇ ಇದು ನುಂಗಿ ನೀರು ಕುಡಿದಿದೆ ನನ್ನನ್ನು ಬಿಟ್ಟು ಹೋಗದಿರಲು ಶಪಥ ಮಾಡಿದಂತಿದೆ
ಒಮ್ಮೊಮ್ಮೆ ಇದು ಇರದು ಮತ್ತೊಮ್ಮೆ ಅತಿಯಾಗಿ ಕಾಡುವುದು
ಬಯಸದೇ ಬರುವ ಅತಿಥಿಯಂತೆ!

ಅದಮ್ಯ ಬಯಕೆ

ಓ ಕಾಲವೇ,

ಒಮ್ಮೆ ನೀ ಹಿಂದಕ್ಕೆ ಹೋಗಬಾರದೆ?

ಆಗ,

ನಾ ಹಿಂದೆ ಆಯ್ದುಕೊಂಡ ಬದುಕಿನ ದಾರಿ ಬದಲಿಸುವೆ 

ನನ್ನಿಂದಾದ ತಪ್ಪುಗಳನ್ನೆಲ್ಲ ಸರಿಪಡಿಸಿಕೊಳ್ಳುವೆ

ಕಳೆದುಹೋದ ಕೆಲವು ಮಧುರ ಕ್ಷಣಗಳ ಮತ್ತೆ ಪಡೆಯುವೆ

ಬದುಕನ್ನು ಇನ್ನಷ್ಟು ಸುಂದರವಾಗಿ ರೂಪಿಸಿಕೊಳ್ಳುವೆ

ಮುರಿದುಹೋದ ಸಂಬಂಧಗಳಿಗೆ ಬೆಸುಗೆ ಹಾಕುವೆ

ಇನ್ನೂ ಒಳ್ಳೆಯ ಕನಸು ಕಾಣುವೆ

ಮುಂದೆ ಅದನ್ನು ನನಸಾಗಿಸುವೆ

ಇಂದು ನಾ ಎಡವಲು ಕಾರಣವಾದ ಕಲ್ಲನ್ನು ಬದಿಗೆ ಸರಿಸುವೆ

ಓ ಕಾಲವೇ, ಇನ್ನೂ ಸಮಯವಿದೆ

ನೀ ಹಿಂದಕ್ಕೆ ಹೋಗಬಾರದೇ....

Friday, September 4, 2020

ನಂಬಿಕೆ

ಗೆಳೆತನವೇ ಇರಲಿ ಪ್ರೀತಿ ಪ್ರೇಮವೇ ಇರಲಿ ಎಲ್ಲದಕ್ಕೂ ಅಡಿಪಾಯ ನಂಬಿಕೆ

ಏಕೆಂದರೆ ಸಂಬಂಧಗಳ ನಡುವೆ ಇರಕೂಡದೆಂದೂ ಅಪನಂಬಿಕೆ

ಎಲ್ಲಿ ನಂಬಿಕೆಯಿದೆಯೋ ಅಲ್ಲಿದೆ ಒಗ್ಗಟ್ಟು ಅದೇ ಇಲ್ಲದಿರೆ ಮಾತ್ರ ತಲೆದೂರುವುದು ಬಿಕ್ಕಟ್ಟು ನಂಬಿಕೆ ಇರದಿರೆ ಅನುಮಾನ ಎಂಬ ಒಂದು ಬಿರುಗಾಳಿಗೇ ಆಗುವುದು ಸಂಬಂಧಗಳ ಸಮಾಧಿ ಆದ್ದರಿಂದಲೆ ನಂಬಿಕೆಯೇ ಎಲ್ಲವನ್ನೂ ನೀಡುವ ನಿಧಿ ನಂಬಿಕೆಯಿಡುವಷ್ಟೇ ಮುಖ್ಯ ಅದನ್ನು ಉಳಿಸಿಕೊಳ್ಳುವುದು, ಉಳಿಸಿಕೊಳ್ಳುತ್ತ ಪ್ರೀತಿ ಸ್ನೇಹ ಎಲ್ಲವ ಹೆಚ್ಚು ಹೆಚ್ಚು ಗಳಿಸಿಕೊಳ್ಳುವುದು

ನಂಬಿಕೆ ಇರದಿರೆ ಮನಸುಗಳು ಕಹಿಯಾಗಿ ಸಂಬಂಧಗಳಾಗುವುದು ಕಗ್ಗಂಟು 

ನಂತರ ಇದು ಎಲ್ಲೆ ಮೀರಿ ಆಗುವುದು ಬಿಡಿಸಲಾಗದ ಒಗಟು

ಬಳ್ಳಿಗೆ ಮರದಂತೆ ಸಂಬಂಧಗಳಿಗೆ ನಂಬಿಕೆಯೇ ಎಂದಿಗೂ ಆಸರೆ

ಪ್ರೀತಿ ವಿಶ್ವಾಸಗಳ ಉಳಿಸಿಕೊಳ್ಳಲು ಹೋಗಬೇಕಾಗಿದೆ ನಂಬಿಕೆಯ ಮೊರೆ

ಇದರಿಂದ ತಿಳಿಯುವುದು ನಂಬಿಕೆಯೇ ಜೀವನ

ನಂಬಿಕೆ ಇರದ ಜೀವನದ ಪಯಣ

ನಮ್ಮನ್ನಾಗಿಸುವುದು ಹೈರಾಣ

ಸಮಯದ ಬೆಲೆ

ಮತ್ತೆ ಹಗಲು ಮತ್ತೆ ಇರುಳು ಕಾಲಚಕ್ರ ಹೀಗೇ ಉರುಳುತ್ತಿದೆ ಅತಿ ವೇಗದಿ ಸಾಗುತ್ತಿದೆ

ಹೀಗಿರಲು ಪ್ರತಿಯೊಂದು ಕ್ಷಣವೂ ಅಮೂಲ್ಯ ಕಳೆದುಹೋಗುತ್ತಿರುವ ಕ್ಷಣವ ತಡೆಯುವುದು ಅಸಾಧ್ಯ

ಆಗಲೇ ಕೈಜಾರಿದೆ ಭೂತಕಾಲ ಮುಂದೇನೋ ಯಾರು ಬಲ್ಲ ಈಗ ಕೈಯಲ್ಲಿರುವುದೊಂದೆ ಅದೇ ವರ್ತಮಾನ ಕಾಲ

ವಸಂತ ಗ್ರೀಷ್ಮ ಹೀಗೆ ಉರುಳುತ್ತಿವೆ ಋತುಮಾನಗಳು ಯಾರಿಗೂ ಕಾಯದೆ ಏನನೂ ಹೇಳದೆ

ಮುಂದಾಲೋಚನೆ ಇರದೆ ಕಾಲಹರಣ ಮಾಡಿದರೆ ಸಮಯವು ವ್ಯರ್ಥ ನಂತರ ಎಷ್ಟು ಪರಿತಪಿಸಿದರೂ ಅದಕ್ಕಿರದು ಅರ್ಥ

ಕಾಲ ಮಿಂಚಿಹೋದ ಮೇಲೆ ಬಾಳು ಬರಿ ಗೋಳೇ ಕಾಲದ ಜೊತೆಗೇ ಸಾಗಿದರೆ ಮಾತ್ರ ನಮ್ಮದು ನಾಳೆ

ಏಕಿರಬಹುದು?

ನಿನ್ನ ನೋಡಿದ ತಕ್ಷಣ ಕಣ್ಣುಗಳೆರಡು ಅರಳುವವು ಆನಂದಬಾಷ್ಪ ಜಿನುಗುವುದು ಏಕಿರಬಹುದು?

ನಿನ್ನ ಮಧುರ ದನಿಯಲಿ ನನ್ನ ಹೆಸರು ಮೂಡಿದಾಗ ಕಿವಿಗಳು ನಿಮಿರುವುದು ಏಕಿರಬಹುದು?

ಯಾರೇ ನಿನ್ನ ಹೋಗಳಿದರೂ ಈ ತುಟಿಯಲಿ ತುಂಟ ಕಿರುನಗೆ ಮೂಡುವುದು ಏಕಿರಬಹುದು?

ನಿನ್ನ ಸ್ಪರ್ಶವಾದೊಡನೆ ರೋಮಾಂಚನವಾಗಿ ಮನಸಿಗೆ ಖುಷಿ ನೀಡುವುದು ಏಕಿರಬಹುದು?

ನೀ ಬಳಿ ಇದ್ದರೂ ನಿನ್ನದೇ ಯೋಚನೆ ನೀ ದೂರವಿದ್ದರೂ ನಿನ್ನದೇ ನೆನಪು ಏಕಿರಬಹುದು?

ನೀ ಜೊತೆ ಇದ್ದರೆ ನಿಧಿ ದೊರೆತಂತೆ ನೀ ದೂರವಿರೆ ಏನೋ ಕೈಜಾರಿದಂತೆ ಅನಿಸುವುದು ಏಕಿರಬಹುದು?

ಇವೆಲ್ಲಕ್ಕೂ ಕಾರಣ ಏನಿರಬಹುದು? ಇದೇ ಪ್ರೀತಿ ಇರಬಹುದೇ? ಈ ಮಧುರ ಅನುಭವಗಳೇ ಪ್ರೇಮವಿರಬಹುದೇ? ಏಕಿರಬಾರದು?

Thursday, September 3, 2020

ಅಮೃತವರ್ಷಿಣಿ

ಸೂರ್ಯನ ಒಂದು ರಶ್ಮಿಗಾಗಿ ಎದುರು ನೋಡುತ್ತಿರುವ ಆ ಸೂರ್ಯಕಾಂತಿಯಂತೆ

ನಿನ್ನ ಒಂದು ನೋಟಕ್ಕಾಗಿ ಚಾತಕ ಪಕ್ಷಿಯಂತೆ ನಾ ಕಾಯುತ್ತಿರುವೆ

ಸಮುದ್ರದ ತೆರೆಗಳು ಬಂದು ಬಂದು ಬಂಡೆಗಪ್ಪಳಿಸುವಂತೆ ನಿನ್ನ ನೆನಪು ಮನಸಿಗೆ ಅಪ್ಪಳಿಸಿ ಮತ್ತೆ ಮತ್ತೆ ನಿನ್ನ ನೆನೆಯುವಂತೆ ಮಾಡುತ್ತಿದೆ

ದೂರದಿಂದೆಲ್ಲಿಂದಲೋ ಬಂದು ಮೈ ಸೋಕಿದ ತಂಗಾಳಿ ಮುದ ನೀಡಿದಾಗ ಅದು ನಿನ್ನ ಸ್ಪರ್ಶವಾಗಬಾರದೆ ಎಂಬ ಬಯಕೆ ಮನಕೆ

ಬೇಸರದ ಬೆಂಗಾಡಿನಲಿ ವಿರಹದ ತಾಪವ ತಾಳಲಾರದೆ ನಾ ಬಳಲಿ ಬೆಂಡಾಗಿರುವಾಗ ಪ್ರೀತಿಯ ಅಮೃತಧಾರೆಯ ಸುರಿಸು ಬಾ ಅಮೃತವರ್ಷಿಣಿ

ಹುಚ್ಚು ಮನ

ಓ ಮನಸೇ,

ನಿನ್ನ ನಾ ಹೇಗೆ ಅರ್ಥ ಮಾಡಿಕೊಳ್ಳಲಿ

ನಿನ್ನಲ್ಲಿ ನನ್ನ ನಾ ಹೇಗೆ ಗುರುತಿಸಲಿ

ನನ್ನೊಳಗಿರುವ ನಿನ್ನ ನಾ ಹೇಗೆ ಹುಡುಕಲಿ

ನೀ ಒಮ್ಮೊಮ್ಮೆ ಈ ಬಾನಿನಷ್ಟು ವಿಶಾಲ

ಹೂವಿನ ಎಸಳಿನಷ್ಟು ಕೋಮಲ

ಕಡೆದ ಬೆಣ್ಣೆಯಷ್ಟು ಮೃದುಲ

ಆದರೆ, ಕೆಲವೊಮ್ಮೆ ವಜ್ರದಷ್ಟು ಕಠಿಣ

ನಿನ್ನೊಂದಿಗೆ ಹೊಂದಿಕೊಳ್ಳುವುದರೊಳಗೆ ನಾ ಹೈರಾಣ

ನಿನ್ನಲ್ಲಿ ಈ ಊಸರವಳ್ಳಿಯಂತಹ ಬದಲಾವಣೆ

ಅದು ಏಕೆಂದು ನಾನಂತೂ ಕಾಣೆ

ನಿನ್ನಲ್ಲೂ ಎರಡು ವಿಧ

ಕೆಟ್ಟಮನಸು, ಒಳ್ಳೆಮನಸು

ಒಂದೊಂದರದು ಒಂದೊಂದು ರೀತಿ ಸೊಗಸು

ನೀ ಕೆಲವೊಮ್ಮೆ ಭಾರ

ಕೆಲವೊಮ್ಮೆ ಅತಿ ಹಗುರ

ಅಬ್ಬಬ್ಬಾ ನೀನಂತು ನನಗೆ ಕೌತುಕದ ಆಗರ

ನಿನ್ನಲ್ಲಿ ಅಡಗಿವೆ ಅದೆಷ್ಟು ಪದರಗಳು

ಒಂದೊಂದು ಪದರದಲ್ಲೂ ಹಲವಾರು ಭಾವನೆಗಳು

ನೀ ಕಣ್ಣಿಗೆ ಕಾಣುವುದಿಲ್ಲ

ನಿನ್ನ ಮುಟ್ಟಲು ಸಾಧ್ಯವಿಲ್ಲ

ಇನ್ನು ನಿನ್ನನ್ನು ಬಚ್ಚಿಡಲೂ ಕಷ್ಟ ಬಿಚ್ಚಿಡಲೂ ಕ್ಲಿಷ್ಟ

ಅರಿವಿಗೆ ಬಾರದು ನಿನ್ನ ಅಗಲ ಆಳ

ನೀ ಬಹಳ ನಿಗೂಢ ಊಹೆಗೆ ನಿಲುಕದು ನಿನ್ನ ವರ್ತನೆ ನೀ ಬಹಳ ಚಂಚಲ

ಕ್ಷಮಯಾಧರಿತ್ರಿ

ಹೆಣ್ಣು ಕ್ಷಮಯಾಧರಿತ್ರಿ ಎನಿಸಿಕೊಂಡ ಮಾತ್ರಕ್ಕೆ ಗಂಡು ಮಾಡುವ ಅನ್ಯಾಯಗಳನ್ನೆಲ್ಲ ಸಹಿಸಬೇಕೆ?

ತನ್ನೆಲ್ಲಾ ನೋವುಗಳನ್ನು ನುಂಗಬೇಕೆ?

ಅವನ ತಪ್ಪುಗಳನ್ನೆಲ್ಲ ಕ್ಷಮಿಸಬೇಕೆ?

ತನ್ನೆಲ್ಲಾ ಆಸೆಗಳನ್ನು ಚಿವುಟಿ ಸುಮ್ಮನಾಗಬೇಕೆ?

ಅವನ ತಾಳಕ್ಕೆ ತಕ್ಕಂತೆ ಕುಣಿಯಬೇಕೆ?

ತನ್ನ ಮೇಲಾದ ದೌರ್ಜನ್ಯಗಳನ್ನೆಲ್ಲ ಮರೆಯಬೇಕೆ?

ಸಾಕು ಸಾಕು!

ಆ ಒಂದು ಪಟ್ಟಕ್ಕೋಸ್ಕರ ಇಷ್ಟೆಲ್ಲ ತ್ಯಾಗ ಅಗತ್ಯವೇ?

ಹಾಗಾದರೆ ಹೆಣ್ಣಿಗೆ ಕ್ಷಮಯಾಧರಿತ್ರಿ ಎಂಬ ಆ ಹೊಗಳಿಕೆಯ ಹೊನ್ನಿನ ಶೂಲವೇ ಬೇಡ

ಕೈಜಾರಿದ ಪ್ರೀತಿ

ಗೆಳತಿ, ನಿನಗಾಗಿ ಈ ಪುಟ್ಟ ಹೃದಯದಲಿ ಕಡಲಾಳದಷ್ಟು ಪ್ರೀತಿ ನಾ ಬಚ್ಚಿಟ್ಟೆ

ನಿನ್ನ ಬಗ್ಗೆ ಆಗಸದೆತ್ತರದಷ್ಟು ಆಶಾಗೋಪುರ ನಾ ಕಟ್ಟಿಬಿಟ್ಟೆ

ಮನಃಪಟಲದಲ್ಲಿ ನಿನ್ನದೇ ಚಿತ್ರ ನಾ ಬಿಡಿಸಿಕೊಂಡೆ

ಈ ನನ್ನ ನಯನಗಳಲ್ಲಿ ನಿನ್ನ ರೂಪವನ್ನೇ ತುಂಬಿಸಿಕೊಂಡೆ

ಆದರೆ, ನೀನು ನನ್ನನ್ನು ಕೇವಲ ಕಾಯಿಸಿದೆ ಬಹಳ ನೋಯಿಸಿದೆ

ಎಲ್ಲ ಮರೆ ಎಂದು ಸುಲಭದಿ ನುಡಿದೆ 

ಆ ನಿನ್ನ ಮಾತಿನ ಬಿರುಗಾಳಿಗೇ ಆಶಾಗೋಪುರ ಕುಸಿದುಬಿತ್ತು

ಮನಃ ಪಟಲದಲ್ಲಿದ್ದದ್ದೆಲ್ಲ ಮಾಸಿಹೋಯಿತು

ನಯನಗಳಲ್ಲಿ ಕಂಬನಿ ಮಾತ್ರ ಉಳಿಯಿತು

ಆ ಕಡಲಾಳದಷ್ಟು ಪ್ರೀತಿ ಎಲ್ಲಿ ಅಂದೆಯಾ?

ಅಯ್ಯೋ ಹುಚ್ಚಿ, ಅಂದೇ ಆ ಪುಟ್ಟ ಹೃದಯ ಒಡೆದು ಚೂರಾಗಿ ಕಡಲು ಬತ್ತಿ ಬರಿದಾಯಿತು!!

Wednesday, September 2, 2020

ವಾಸ್ತವ

 ನಾವೆಂದುಕೊಂಡಷ್ಟು ಸುಲಭ ಅಲ್ಲ ಜೀವನ

ಎಂದಿದ್ದರೂ ಇದು ಮಣ್ಣಿನ ದೋಣಿಯ ಮೇಲೆ ಪಯಣ

ಹಲವು ಬಾರಿ ತಲೆಕೆಳಗಾಗುವುದು ನಮ್ಮೆಲ್ಲಾ ಲೆಕ್ಕೆಚಾರಗಳು

ಗಾಳಿಗೆ ತೂರಿ ಹೋಗುವವು ಕಂಡ ಕನಸುಗಳು

ಬರುವಾಗ ಒಂಟಿ ಹೋಗುವಾಗ ಒಂಟಿ ಇವೆರಡರ ಮಧ್ಯೆ ಬರೀ ಕತ್ತಲು ನಮ್ಮ ಜಂಟಿ

ಪರಿಸ್ಥಿತಿಗಳು ಕೈಮೀರಿ ಆಗುವುದು ಕ್ಲಿಷ್ಟ

ಧೈರ್ಯವಿರದಿರೆ ಅವನ್ನೆಲ್ಲ ಎದುರಿಸುವುದು ಕಷ್ಟ

ಇರುವುದೆಲ್ಲವ ಬಿಟ್ಟು ಇಲ್ಲದರ ಕಡೆಗೇ ಒಲವು

ಇದೇ ಮುಂದುವರೆದರೆ ಅಸಾಧ್ಯ ಈ ಪಯಣದಿ ಗೆಲುವು

ಆಕಸ್ಮಿಕವಾಗಿ ಎದುರಾಗುವ ವಿಚಿತ್ರ ತಿರುವುಗಳು

ಬಿಡಿಸಲಾರದ ಕಗ್ಗಂಟುಗಳಾಗಿಯೇ ಉಳಿಯುವವು

ಇಷ್ಟೆಲ್ಲಾ ಅರಿವಾಗುವುದರೊಳಗೆ ಕಟ್ಟಬೇಕಾಗುವುದು ಗಂಟುಮೂಟೆ

ಮುಂದೇನು ಉಳಿಯುವುದು? ಬರೀ ಲೊಳಲೊಟ್ಟೆ

ಅಡಕತ್ತರಿ

ಹೊರಗೆ ತಂಗಾಳಿ ಬೀಸುತ್ತಿದ್ದರೂ ಏನು ಪ್ರಯೋಜನ?

ಒಳಗೆ ಮನವು ಕುದಿಯುತ್ತಿದೆ

ಏಕೋ ಕಸಿವಿಸಿ ಏನೋ ತಳಮಳ

ಹೇಳಲೂ ಬಾರದು ಹೇಳದೆ ಇರಲಾಗದು

ಈ ಸಂಕಟವೇ ಕಿತ್ತು ತಿನ್ನುತ್ತಿದೆ

ಏನೂ ಮಾಡಲು ದಾರಿ ತೋಚದು

ಆಗಿದೆ ಸ್ಥಿತಿಯು ಅಡಕತ್ತರಿಯಲ್ಲಿರುವ ಅಡಕೆಯಂತೆ

ಜಲದ ಬೆಲೆ

 ನೀರು ನೀರು ನೀರು 

ಎಲ್ಲೆಲ್ಲೂ ನೀರಿಗೆ ಹಾಹಾಕಾರ 

ನೀರೇ ಬದುಕಿಗೆ ಆಧಾರ

ನೀರಿಲ್ಲದೆ ಒಣಗಿವೆ ತರುಲತೆಗಳು

ವಲಸೆ ಹೋಗುತ್ತಿವೆ ಪಕ್ಷಿಗಳು 

ಪ್ರಾಣ ತ್ಯಜಿಸುತ್ತಿವೆ ಪ್ರಾಣಿಗಳು

ನೀರಿಗಾಗಿ ಅಗೆದು ಅಗೆದು ಭೂಮಿ ಬರಡು ಮಾಡಿದರು 

ಆಕಾಶಕ್ಕೂ ಹೋಗಿ ಮೋಡ

ಬಿತ್ತನೆ ಮಾಡಿದರು

ಆದರೆ ಮಳೆ ಬಂದಾಗ ನೀರು ಶೇಖರಿಸಲಿಲ್ಲ

ಮರ ಕಡಿಯುವುದನ್ನೂ ನಿಲ್ಲಿಸಲೇ ಇಲ್ಲ

ನೀರಿಲ್ಲದೆ ಆಗುವುದು ಜೀವನ ಅಸ್ತವ್ಯಸ್ತ

ಸುಮ್ಮನೆ ಎಷ್ಟು ಯೋಚಿಸಿದರೂ ಎಲ್ಲವೂ ವ್ಯರ್ಥ

ಮುಂದೊಂದು ದಿನ ನೀರನ್ನು ಎಲ್ಲೂ ಕಾಣದೆ

ಹಾಕುವನೇನೋ ಮನುಷ್ಯ ಬಾಯಿ ಸಮುದ್ರಕ್ಕೇ

ಇನ್ನಾದರೂ ಎಚ್ಚೆತ್ತುಕೋ ಭಂಡ ಮಾನವ

ಆಗದಿರು ಎಂದಿಗೂ ನೀ ದಾನವ

ನಿನ್ನ ಕೊಡುಗೆ ಮುಖ್ಯ ಮುಂದಿನ ಪೀಳಿಗೆಗೆ

ಇನ್ನು ಮುಂದಾದರೂ ದುಡಿ ನೀ ( ಭೂಮಿಯ) ಎಲ್ಲರ ಏಳಿಗೆಗೆ