Thursday, June 11, 2020

ಮಹಾದಾನ

ತನ್ನ ವಾಕಿಂಗ್ ಸ್ಟಿಕ್ ಹಿಡಿದು ಮನೆಯಿಂದ ಹೊರಟ ಅಶೋಕನ ನಡಿಗೆಯಲ್ಲಿ ಇಂದು ಹೊಸ ಹುರುಪಿತ್ತು. ಅವನ ಎಷ್ಟೋ ವರ್ಷಗಳ ಕನಸು ನನಸಾಗುವುದರಲ್ಲಿತ್ತು. ಡಾ|| ವೆಂಕಟೇಶ್ ದೂರವಾಣಿ ಕರೆ ಮಾಡಿ ವಿಷಯ ತಿಳಿಸಿದಾಗ ಅಶೋಕನಿಗೆ ನಂಬಲು ಸಾಧ್ಯವಾಗಲಿಲ್ಲ.

ಹಲವು ವರ್ಷಗಳ ಹಿಂದೆ ಒಂದು ರಸ್ತೆ ಅಪಘಾತದಲ್ಲಿ ತನ್ನ ಕಣ್ಣಿನ ಕಾರ್ನಿಯಾಗೆ ಬಿದ್ದ ಏಟಿನಿಂದಾಗಿ ಅಶೋಕ ದೃಷ್ಟಿ ಕಳೆದುಕೊಂಡಿದ್ದ. ಈಗ, ರಸ್ತೆ ಅಪಘಾತವೊಂದರಲ್ಲಿ ಮೃತನಾದ ವ್ಯಕ್ತಿಯೊಬ್ಬನ ಅಂಗಾಂಗಗಳನ್ನು ಅವನ ಕುಟುಂಬದವರು ದಾನ ಮಾಡಲು ನಿರ್ಧರಿಸಿದ್ದರು. ಅದೇ ವ್ಯಕ್ತಿಯ ಕಣ್ಣಿನ ಕಾರ್ನಿಯಾ ಅಶೋಕನಿಗೆ ಎಲ್ಲಾ ರೀತಿಯಲ್ಲೂ ಸರಿಹೊಂದುತ್ತದೆಂದು ಡಾ|| ವೆಂಕಟೇಶ್ ಖಾತ್ರಿ ಪಡಿಸಿದ್ದರು.

"ನೇತ್ರದಾನ ಮಹಾದಾನ" ಎಂಬುದು ಸುಳ್ಳಲ್ಲ ಎನಿಸಿತು ಅಶೋಕನಿಗೆ. ತನಗೆ ದೃಷ್ಟಿ ಬಂದ ಮೇಲೆ ಮಾಡುವ ಮೊದಲ ಕೆಲಸ, ತನ್ನ ಅಂಗಾಂಗಗಳ ದಾನದ ಅರ್ಜಿಗೆ ಸಹಿ ಹಾಕುವುದು. ತನಗೆ ಜೀವನ ನೀಡಿದ ವ್ಯಕ್ತಿಯಂತೆ ತಾನು ಕೂಡ ಹಲವರಿಗೆ ಜೀವನ ನೀಡಬೇಕು ಎಂದು ನಿರ್ಧರಿಸಿದನು ಅವನು.

No comments: